ಬೆಂಗಳೂರು: ‘ಮಲೆ ಮಹದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿಯಾಗಿ ಕಾನೂನುಬಾಹಿರವಾಗಿ ನೇಮಕಗೊಂಡಿರುವ ಎಂ. ಬಸವರಾಜು ಭಾರಿ ಅವ್ಯವಹಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ನಗರ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ.
ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ಅಧೀಕ್ಷಕರಾಗಿದ್ದ ಬಸವರಾಜು ಅವರನ್ನು ಹಿಂದಿನ ಸರ್ಕಾರ ಮಹದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಿತು. ಆನಂತರ ಅವರನ್ನು ಉಪ ಕಾರ್ಯದರ್ಶಿ ಆಗಿ ನೇಮಿಸಲಾಯಿತು. ಇದು ಹಿರಿಯ ಕೆಎಎಸ್ ಅಧಿಕಾರಿ ಶ್ರೇಣಿಯ ಹುದ್ದೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಸವರಾಜು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರ ಹಿಂದಿನ ಕ್ಷೇತ್ರ ವರುಣಾಕ್ಕೆ ಸೇರಿದವರಾದ್ದರಿಂದ ಅರ್ಹತೆಗೆ ಮೀರಿದ ಹುದ್ದೆ ನೀಡಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಅವರು ಅಕ್ರಮ ನಡೆಸುತ್ತಿದ್ದಾರೆ. ಖರೀದಿಯಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೂ ದೂರು ನೀಡಿದ್ದು, ಅವ್ಯವಹಾರ ಆರೋಪ ಕುರಿತು ವಿಚಾರಣೆ ನಡೆಸುವಂತೆ ರಮೇಶ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.