ಬೆಂಗಳೂರು: ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಸಾಲದು, ಅವರ ಹಿಂದಿನ ಪಿತೂರಿಗಾರರ ವಿರುದ್ಧ ಕ್ರಮ ಕೈಗೊಂಡರೆ ಪ್ರಕರಣಗಳು ಮರುಕಳಿಸುವುದಿಲ್ಲ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು ‘ನಾನು ಗೃಹ ಸಚಿವನಾಗಿದ್ದಾಗ ವರದಿ ತರಿಸಿಕೊಂಡೆ. ಆಗ ನಾಲ್ಕೈದು ಜನರು ರಾಜಕೀಯ ಕಾರಣಕ್ಕೆ ಹತ್ಯೆಯಾದರೆ ಉಳಿದ ಹತ್ಯೆಗಳು ಹಳೇ ದ್ವೇಷ, ಆಸ್ತಿ ಜಗಳ, ಅಪಘಾತದಿಂದ ಸತ್ತಿದ್ದಾರೆ. ಆ ಬಗ್ಗೆ ‘ನಗ್ನ ಸತ್ಯ’ ಎಂಬ ಪುಸ್ತಕ ಬಿಡುಗಡೆ ಮಾಡಿದ್ದೆ. ಅದರಲ್ಲಿ ಸತ್ತವರು ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಎಸ್ಡಿಪಿಐ, ಪಿಫ್ಎಐ ಸದಸ್ಯರೂ ಇದ್ದರು. ಅದಕ್ಕೆ ಕಾರಣ ಯಾರು?ಮೊದಲುಕೊಲೆ ಮಾಡಿದವರ ವಿರುದ್ಧ ದೋಷಾರೋಪ ಸಲ್ಲಿಸಲಾಗುತ್ತಿತ್ತು. ಪಿತೂರಿ ಮಾಡಿದವರ ಹೆಸರು ಸೇರುತ್ತಿರಲಿಲ್ಲ. ನಂತರ 2017-18ರಲ್ಲಿ ಪ್ರಕರಣದಲ್ಲಿ ಸೇರಿಸಲು ಆರಂಭಿಸಿದ ನಂತರ ಕೊಲೆಗಳ ಸರಣಿ ನಿಂತಿತು’ ಎಂದು ವಿವರ ನೀಡಿದರು.
‘2013ರಿಂದ 2018ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. 23 ಹಿಂದೂ ಯುವಕರ ಕೊಲೆ ಆಗಿದೆ ಎಂದು ರಾಜ್ಯದ ಮೂಲೆ ಮೂಲೆಯಲ್ಲಿ ಅಪಪ್ರಚಾರ ಮಾಡಿಕೊಂಡು ಓಡಾಡಿದರು. ಈಗ ಮತ್ತೆ ಕೊಲೆಗಳು ಆರಂಭವಾಗಿವೆ. ಕಳೆದ ಮೂರು ವರ್ಷಗಳಿಂದ ಇವರೇ ಆಡಳಿತ ಮಾಡುತ್ತಿದ್ದು, ಕೊಲೆಗಳು ಏಕೆ ನಡೆಯುತ್ತಿವೆ’ ಎಂದು ಪ್ರಶ್ನಿಸಿದರು.
**
ಬಿಬಿಎಂಪಿ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸಿದೆ. ವಾರ್ಡ್ ಮರುವಿಂಗಡಣೆ ಮಾಡಿದ ಬಿಜೆಪಿಯೇ ಈಗ ಮೀಸಲಾತಿ ಪಟ್ಟಿಯನ್ನೂ ಸಿದ್ಧಪಡಿಸುತ್ತಿದೆ. ಅಧಿಕಾರಿಗಳು ಸುಮ್ಮನೆ ಇದ್ದಾರೆ. ಕಾಂಗ್ರೆಸ್ ಸೋಲಿಸಲು ಎಲ್ಲ ಪಿತೂರಿ ನಡೆದಿದೆ.
-ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.