ADVERTISEMENT

ಪೂರ್ಣಗೊಂಡ ಕಾಮಗಾರಿಗಳ ಬಿಲ್‌ ಪಾವತಿಸಲು ಸರ್ಕಾರಕ್ಕೆ ಗುತ್ತಿಗೆದಾರರ ಗಡುವು

‘ಡಿಸೆಂಬರ್‌ ವೇಳೆಗೆ ಬಾಕಿ ಪಾವತಿಸದಿದ್ದರೆ ರಾಜ್ಯದಾದ್ಯಂತ ಕಾಮಗಾರಿ ಸ್ಥಗಿತ’

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:44 IST
Last Updated 18 ಅಕ್ಟೋಬರ್ 2025, 23:44 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ‘ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್‌ಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಪಾವತಿ ಮಾಡದಿದ್ದರೆ, ರಾಜ್ಯದಾದ್ಯಂತ ಎಲ್ಲ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಎಚ್ಚರಿಸಿದೆ.

‘ಕಾಮಗಾರಿ ನಡೆಸಿದ ಬಾಬ್ತು, ಸರ್ಕಾರ ವಿವಿಧ ಇಲಾಖೆಗಳಲ್ಲಿ ₹33 ಸಾವಿರ ಕೋಟಿ ಬಾಕಿ ಉಳಿದಿದೆ. ಎರಡೂವರೆ ವರ್ಷಗಳಿಂದ ಬಾಕಿ ಉಳಿದಿರುವ ಹಣವನ್ನು ಪಾವತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಲಾಖೆಗಳ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರೂ ಕ್ರಮವಾಗಿಲ್ಲ. ಹೀಗಾಗಿ, ಅಂತಿಮ ಗಡುವು ನೀಡಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌  ಹೇಳಿದರು.

ADVERTISEMENT

‘ಒಂದೇ ಬಾರಿಯಲ್ಲದಿದ್ದರೂ ಹಂತಹಂತವಾಗಿ ಹಣ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ಸರ್ಕಾರ ತೋರಬೇಕಿತ್ತು. ಆದರೆ, ಸರ್ಕಾರ ಗುತ್ತಿಗೆದಾರರನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಗೌರಿ– ಗಣೇಶ, ದಸರಾ, ದೀಪಾವಳಿ ಸಂದರ್ಭದಲ್ಲೂ ಬಾಕಿ ಹಣ ಬಿಡುಗಡೆ ಮಾಡುವ ಪರಿಪಾಟವನ್ನೂ ಈ ಸರ್ಕಾರ ಪಾಲಿಸಿಲ್ಲ’ ಎಂದು ದೂರಿದರು.

‘ಕಾರ್ಮಿಕ ಇಲಾಖೆಗಳಲ್ಲಿ ಅಧಿಕಾರಿಗಳು ₹784 ಕೋಟಿ ಮೊತ್ತದ ಕಾಮಗಾರಿಗಳು ಬಲಾಢ್ಯ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ  ಎಂಟು–ಒಂಬತ್ತು ಜಿಲ್ಲೆಗಳನ್ನು ಸೇರಿಸಿ ನಾಲ್ಕು ಪ್ಯಾಕೇಜ್‌ ಮಾಡಿದ್ದಾರೆ. ಇದರಿಂದ ಹೊರ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗಲಿದ್ದು, ನಮ್ಮ ಗುತ್ತಿಗೆದಾರರನ್ನು ಹೊರಗಿಡಲೇ ಇಂತಹ ಕೆಲಸ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಮುಖ್ಯಮಂತ್ರಿಯವರು ಈ ಬಗ್ಗೆ ಮಧ್ಯಪ್ರವೇಶಿಸಿ, ಪ್ಯಾಕೇಜ್‌ ಟೆಂಡರ್‌ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘ನಗರಾಭಿವೃದ್ಧಿ ಇಲಾಖೆಯ 10 ಮಹಾನಗರ ಪಾಲಿಕೆಗಳಲ್ಲೂ ಪ್ಯಾಕೇಜ್‌ ಟೆಂಡರ್‌ ಕರೆದು ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ತುಂಬಾ ಅನ್ಯಾಯ ಮಾಡುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿರುವ ಸಮಸ್ಯೆಗಳನನ್ನು ಸಚಿವರು ಹಾಗೂ ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಹಲವಾರು ಸಭೆ ನಡೆಸಿದ್ದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಮಂಜುನಾಥ್‌ ದೂರಿದರು.

ನ್ಯಾಯಾಲಯಕ್ಕೆ ಹೋಗಲಿ: ಸಿ.ಎಂ

‘ಆರೋಪ ಮಾಡುತ್ತಿರುವವರು ನ್ಯಾಯಾಲಯದ ಮೊರೆಹೋಗಲಿ ’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮೀಷನ್ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿರುವ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಆರೋಪಿಸಲಾಗುತ್ತಿದೆ’ ಎಂದರು. ಪಾವತಿಯಾಗದಿದ್ದರೆ ರಾಜ್ಯಪಾಲರನ್ನು ಭೇಟಿಮಾಡುವುದಾಗಿ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆದಾರರಿಗೆ ಬೆದರಿಕೆಗೆ ಬಗ್ಗಲ್ಲ: ಡಿ.ಕೆ. ಶಿವಕುಮಾರ್‌

‘ಗುತ್ತಿಗೆದಾರರಿಗೆ ಬಾಕಿ ಇರುವ  ಹಣವನ್ನು ನಾವು ಕೊಡಲೇ ಬೇಕು, ಕೊಡುತ್ತೇವೆ. ಗಡುವು ನೀಡುವ ಬೆದರಿಕೆ ಹಾಕಿದರೆ ನಾವು ಬಗ್ಗಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಸುದ್ದಿಗಾರ
ರೊಂದಿಗೆ ಮಾತನಾಡಿದ ಅವರು, ‘ಬಜೆಟ್‌ನಲ್ಲಿ ಹಣ ಇಲ್ಲದೆ ಬಿಜೆಪಿಯವರು ಹಿಂದೆ ಕಾಮಗಾರಿ ನೀಡಿದ್ದರು. ಅದನ್ನು ಕೊಡಲು ಸಮಸ್ಯೆಯಾಗಿವೆ. ಇರುವ ಒಂದಷ್ಟು ಹಣ ನೀಡುತ್ತೇವೆ. ಗುತ್ತಿಗೆದಾರರೇ ಹಂಚಿಕೊಳ್ಳಲಿ’ ಎಂದರು.

‘ಜಲ ಸಂಪನ್ಮೂಲ ಇಲಾಖೆಯಲ್ಲಿ ಹೆಚ್ಚು ಬಾಕಿ ಇಲ್ಲ. ಅದನ್ನು ಶೀಘ್ರ ಕೊಡುತ್ತೇನೆ ಎಂದು ಹೇಳಿದ್ದೇನೆ. ಇತರೆ ಇಲಾಖೆಗಳಲ್ಲಿ ಸಮಸ್ಯೆ ಇದ್ದು, ಮುಖ್ಯಮಂತ್ರಿಯವರ ಭೇಟಿಗೆ ಅವಕಾಶ ಮಾಡಿಕೊಡುತ್ತೇನೆ. ಮಾತನಾಡಿ ಎಂದು ಅವರಿಗೆ ಹೇಳಿದ್ದೇನೆ’ ಎಂದರು.

‘ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ಕೊಡುವುದಾದರೆ, ನಾನೇ ಅವರಿಗೆ ಅಪಾಯಿಂಟ್‌ಮೆಂಟ್‌ ಕೊಡಿಸುತ್ತೇನೆ, ಹೋಗಿ ಹೇಳಿಕೊಳ್ಳಲಿ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.