ADVERTISEMENT

ಕೊರೊನಾ ಪ್ಯಾಕೇಜ್: ವಿವಿಧ ಸಮುದಾಯಗಳವರ ಅಸಮಾಧಾನ 

ಸಿದ್ದರಾಮಯ್ಯ ಭೇಟಿಯಾಗಿ ಮನವಿ ಸಲ್ಲಿಸಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 7 ಮೇ 2020, 9:35 IST
Last Updated 7 ಮೇ 2020, 9:35 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವ ವಿವಿಧ ಸಮುದಾಯಗಳ ಮುಖಂಡರು ಗುರುವಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೊರೊನಾ ಪ್ಯಾಕೇಜ್‍ನಲ್ಲಿ ಸರ್ಕಾರ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಬುಧವಾರ ಘೋಷಣೆ ಮಾಡಿರುವ ಪ್ಯಾಕೇಜ್‍ನಲ್ಲಿ ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರಿಗೆ ಮಾತ್ರ ನೆರವು ಘೋಷಣೆ ಮಾಡಿದ್ದಾರೆ. ಆದರೆ, ಆ ವರ್ಗದವರಿಗೂ ನೆರವು ಸೂಕ್ತ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂದು ಮುಖಂಡರು ಹೇಳಿದರು.

ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಶ್ರೀ ಭಾವಸಾರ ಕ್ಷತ್ರಿಯ ಸಮಾಜ (ದರ್ಜಿಗಳು)ಶ್ರೀ ವಿಶ್ವಕರ್ಮ ಸೇವಾ ಸಮಿತಿ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಸಂಘ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಹಾ ಒಕ್ಕೂಟ, ಅಲೆಮಾರಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಪತ್ರಗಳನ್ನು ಸಲ್ಲಿಸಿದರು.

ADVERTISEMENT

ವಿದ್ಯುತ್ ಮಗ್ಗ ನೇಕಾರರು, ಗಾಣಿಗರು, ಕುಂಬಾರ, ಕಮ್ಮಾರ, ಮೇದರು, ದರ್ಜಿಗಳು, ವಿಶ್ವಕರ್ಮ, ಅಲೆಮಾರಿಗಳು, ಬುಡಕಟ್ಟು ಸಮುದಾಯ, ಉಪ್ಪಾರರು, ಅರ್ಚಕರು, ಮಂಗಳವಾದ್ಯ ನುಡಿಸುವವರು, ಕಲಾವಿದರು, ಛಾಯಾಗ್ರಾಹಕರನ್ನು ಕೊರೊನಾ ಪ್ಯಾಕೇಜ್‍ನಲ್ಲಿ ಸೇರಿಸದಿರುವ ಬಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎಂ.ಡಿ. ಲಕ್ಷ್ಮಿನಾರಾಯಣ ಅವರೂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧನ್ಯವಾದ ಸಲ್ಲಿಸಿದ ಮುಖಂಡರು :

ಸರ್ಕಾರ ತಮ್ಮ ಸಮುದಾಯದವರಿಗೆ ನೆರವು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರು ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಸಂಘಟನೆಗಳ ಪ್ರಮುಖ ಬೇಡಿಕೆಗಳು :

ಕಬ್ಬಿಣ ಕೆಲಸಗಾರರು, ಕಲ್ಲಿನ ವಿಗ್ರಹ ತಯಾರು ಮಾಡುವವರು, ಚಿನ್ನ, ಬೆಳ್ಳಿ ಕೆಲಸದಲ್ಲಿರುವವರು, ಎರಕದ ಕೆಲಸಗಾರರಿಗೆ ವಿಶೇಷ ಪ್ಯಾಕೇಜ್.ಮರಗೆಲಸ, ಗೊಂಬೆಗಳಿಗೆ ಬಣ್ಣ ಹಚ್ಚುವವರು, ಕರಕುಶಲ ಕೆಲಸದವರಿಗೆ ನೆರವು.ಲಕ್ಷಾಂತರ ಸಂಖ್ಯೆಯಲ್ಲಿರುವ ಟೈಲರ್ಗಳಿಗೆ ಸಹಾಯ.ಶುದ್ಧ ಎಣ್ಣೆ ತಯಾರು ಮಾಡುವ ಗಾಣಿಗರಿಗೆ ಆರ್ಥಿಕ ನೆರವು.
ವಿದ್ಯುತ್ ಮಗ್ಗಗಳನ್ನು ಹೊಂದಿರುವ ನೇಕಾರರನ್ನು ಪ್ಯಾಕೇಜ್‍ನಲ್ಲಿ ಸೇರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.