ADVERTISEMENT

Covid-19 Karnataka Updates: 40,990 ಹೊಸ ಪ್ರಕರಣ, 271 ಸಾವು

​ಪ್ರಜಾವಾಣಿ ವಾರ್ತೆ
Published 1 ಮೇ 2021, 19:06 IST
Last Updated 1 ಮೇ 2021, 19:06 IST
ಕೊರೊನಾ ವೈರಸ್‌ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನಿಂದ ಮೃತ ಪಡುತ್ತಿರುವವರ ಸಂಖ್ಯೆ ಏರುಗತಿ ಪಡೆದುಕೊಂಡಿದೆ. ಸೋಂಕಿತರ ಪೈಕಿ ಶನಿವಾರ ಒಟ್ಟು 271 ಮಂದಿ ಸತ್ತಿದ್ದಾರೆ. ದೃಢ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿರುವುದು ತುಸು ಸಮಾಧಾನ ತರಿಸಿದೆ. 24 ಗಂಟೆಗಳಲ್ಲಿ ಒಟ್ಟು 40,990 ಮಂದಿ ಸೋಂಕಿಗೊಳಗಾಗಿದ್ದಾರೆ.

ಶನಿವಾರ ಒಟ್ಟು 1.77 ಲಕ್ಷ ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ (1.89 ಲಕ್ಷ) ಇದು ಅಲ್ಪ ಕಡಿಮೆ. ಹೀಗಾಗಿ ಸೋಂಕು ದೃಢ ಪ್ರಮಾಣ ಶೇ 23.03ಕ್ಕೆ ತಗ್ಗಿದೆ. ಮರಣ ಪ್ರಮಾಣ ದರ ಶೇ 0.66ರಷ್ಟಿದೆ.

ರಾಜ್ಯದ 30 ಜಿಲ್ಲೆಗಳಲ್ಲೂ ಸೋಂಕಿತರ ಪ್ರಮಾಣ ಮೂರಂಕಿ ಮುಟ್ಟಿದೆ. ಬೆಂಗಳೂರು (19,353), ಮೈಸೂರು (2,529), ಮಂಡ್ಯ (1,235), ಬಳ್ಳಾರಿ (1,163) ಹಾಗೂ ದಕ್ಷಿಣ ಕನ್ನಡ (933) ಜಿಲ್ಲೆಗಳಲ್ಲಿ ಪ್ರಕರಣಗಳು ಇಳಿಮುಖವಾಗಿವೆ. ತುಮಕೂರು (2,308), ಕಲಬುರ್ಗಿ (1,407), ಕೊಪ್ಪಳ (1,019), ಬೆಂಗಳೂರು ಗ್ರಾಮಾಂತರ (940) ಮತ್ತು ಚಿಕ್ಕಬಳ್ಳಾಪುರದಲ್ಲಿ (820) ಮತ್ತಷ್ಟು ಹೊಸ ಪ್ರಕರಣಗಳು ವರದಿಯಾಗಿವೆ.

ADVERTISEMENT

ಹಾಸನ (790), ರಾಯಚೂರು (601), ಶಿವಮೊಗ್ಗ (661), ಉಡುಪಿ (670) ಹಾಗೂ ಉತ್ತರ ಕನ್ನಡದಲ್ಲೂ (687) ಅಧಿಕ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕೋವಿಡ್‌ ಪೀಡಿತರ ಒಟ್ಟು ಸಂಖ್ಯೆ 15.66 ಲಕ್ಷಕ್ಕೆ ಹೆಚ್ಚಿದೆ.

ಬೆಂಗಳೂರಿನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ದು‍ಪ್ಪಟ್ಟಾಗಿದೆ. ಶನಿವಾರ 162 ಮಂದಿ ಸಾವಿಗೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರಿನಲ್ಲಿ ತಲಾ 12, ಬಳ್ಳಾರಿ ಹಾಗೂ ಹಾಸನದಲ್ಲಿ ತಲಾ 8, ಮೈಸೂರಿನಲ್ಲಿ 7, ದಾವಣಗೆರೆ, ಕಲಬುರ್ಗಿ, ಶಿವಮೊಗ್ಗದಲ್ಲಿ ತಲಾ 6, ಉತ್ತರ ಕನ್ನಡ, ಯಾದಗಿರಿಯಲ್ಲಿ ತಲಾ 5, ಚಿಕ್ಕಮಗಳೂರು, ಧಾರವಾಡ, ರಾಮನಗರ ಹಾಗೂ ವಿಜಯಪುರದಲ್ಲಿ ತಲಾ ನಾಲ್ಕು ಮಂದಿ ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.