ಬೆಂಗಳೂರು: ಕೊರೊನಾ ವೈರಸ್ ವಿರುದ್ಧ ಸೆಣಸುತ್ತಿರುವ ವೈದ್ಯಕೀಯ ವೃಂದ, ಪೊಲೀಸರು ಹಾಗೂ ಪೌರಕಾರ್ಮಿಕರನ್ನು ಚಪ್ಪಾಳೆ ಮೂಲಕ ಗೌರವಿಸಬೇಕೆಂಬ ಪ್ರಧಾನಿ ಮೋದಿ ಅವರ ಕರೆಗೆ ಬೆಂಬಲಿಸುತ್ತೇನೆ. ಆದರೆ, ವಿಪತ್ತಿನ ವಿರುದ್ಧ ಹೋರಾಡುತ್ತಿರುವ ಈ ವರ್ಗಕ್ಕೆ ಸರ್ಕಾರ Incentive (ಪ್ರೋತ್ಸಾಹ ಧನ) ಘೋಷಿಸಿ ಅವರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಸಮಯ, ಕುಟುಂಬ, ಆರೋಗ್ಯ ಲೆಕ್ಕಿಸದೇ ಧೈರ್ಯದಿಂದ ಹೋರಾಡುತ್ತಿರುವ ವೈದ್ಯಕೀಯ ವೃಂದ, ಪೊಲೀಸರು, ಪೌರಕಾರ್ಮಿಕರ ಪರಿಶ್ರಮವನ್ನು ಗೌರವಿಸಬೇಕು. ಪ್ರೋತ್ಸಾಹ ಧನದ ಮೂಲಕ ನೈತಿಕ, ಆರ್ಥಿಕ ಬೆಂಬಲ ನೀಡಬೇಕು. ಇಷ್ಟೇ ಅಲ್ಲ, ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ 'ಗೌರವ ಪತ್ರ' ನೀಡಿ ಅವರ ಹೋರಾಟವನ್ನು ಅಜರಾಮರಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ ಫೆಬ್ರುವರಿಯಿಂದಲೇ ವೈದ್ಯಕೀಯ ವೃಂದದವರು, ಪೊಲೀಸರು, ಪೌರಕಾರ್ಮಿಕರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಆದ್ದರಿಂದ, ಫೆಬ್ರುವರಿಯಿಂದ ಆರಂಭಿಸಿ, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುವವರೆಗೆ ಪ್ರತಿ ತಿಂಗಳು ಇವರೆಲ್ಲರಿಗೂ ಪ್ರೋತ್ಸಾಹ ಧನ ನೀಡಬೇಕು. ಅವರ ಧೈರ್ಯ, ತ್ಯಾಗಕ್ಕೆ ಸರ್ಕಾರ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.