ADVERTISEMENT

ಕೋವಿಡ್‌ನಿಂದಾಗಿ ಹಜ್ ಯಾತ್ರೆ ಕನಸಿಗೂ ‌ಭಂಗ

ಮುಂದುವರಿದ ಸಾವಿರಾರು ಜನರ ಕಾಯುವಿಕೆ

ಬಸೀರ ಅಹ್ಮದ್ ನಗಾರಿ
Published 31 ಜುಲೈ 2020, 21:09 IST
Last Updated 31 ಜುಲೈ 2020, 21:09 IST

ಹುಬ್ಬಳ್ಳಿ: ‘ಹಜ್‌ ಯಾತ್ರೆ ಮಾಡಬೇಕು ಎಂದು ಹಲವು ವರ್ಷಗಳಿಂದ ಅಂದುಕೊಳ್ಳುತ್ತಲೇ ಇದ್ದೆ. ನೌಕರಿ, ಮಕ್ಕಳ ಓದು, ಅವರ ಮದುವೆ, ಮನೆ ಜವಾಬ್ದಾರಿಯಿಂದ ಮುಂದೂಡುತ್ತಲೇ ಹೋದೆ. ಈ ವರ್ಷ ಪತ್ನಿಯೊಂದಿಗೆ ಮಕ್ಕಾಗೆ ತೆರಳಲು ಸಜ್ಜಾಗಿದ್ದೆ. ಆದರೆ, ಕೊರೊನಾ ಸೋಂಕಿನಿಂದಾಗಿ ಈ ವರ್ಷವೂ ಕನಸು ಕೈಗೂಡಲಿಲ್ಲ’

–ಬೆಂಗಳೂರು ನಿವಾಸಿ, ನಿವೃತ್ತ ಸರ್ಕಾರಿ ನೌಕರ ಸಯ್ಯದ್ ಇಸಾಕ್‌ಅಲಿ ಅಹ್ಮದ್‌ ಅವರ ಅಭಿಪ್ರಾಯವಿದು. ಇದು ಅವರೊಬ್ಬರದೇ ಮಾತಲ್ಲ. ಹುಬ್ಬಳ್ಳಿಯ ಸಿಬಿಟಿ ನಿವಾಸಿ ಮಸೂದ್‌ಅಹ್ಮದ್‌ ಮಕಾನದಾರ್‌ ಹಾಗೂ ಅವರ ಪತ್ನಿ, ಬೆಂಗಳೂರಿನ ಆರ್‌.ಟಿ.ನಗರದ ಡಾ.ಎಂ.ಅಶ್ಫಾಕ್‌ ಅಹ್ಮದ್, ಸಯ್ಯದ್ ಸನವುಲ್ಲಾ, ರುಹೈಲ್‌ ಸೇರಿದಂತೆ ಹಲವರ ಅನಿಸಿಕೆಯೂ ಹೌದು.

ಇಸ್ಲಾಮಿನ ಐದು ಕಡ್ಡಾಯ ನಿಯಮಗಳಲ್ಲಿ ಒಂದಾದ ಹಜ್‌ ಯಾತ್ರೆ ಮಾಡಲು ಈ ವರ್ಷ ಕೋವಿಡ್ ಅಡ್ಡಿಯಾಗಿದೆ. ಹಜ್‌ ಯಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 9,332 ಜನರು ಕರ್ನಾಟಕ ರಾಜ್ಯ ಹಜ್ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ನಗರವೊಂದರಿಂದಲೇ 3,401 ಅರ್ಜಿಗಳು ಸಲ್ಲಿಕೆಯಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಿಂದ 599, ಮೈಸೂರಿನಿಂದ 565, ಬೆಳಗಾವಿಯಿಂದ 508 ಹಾಗೂ ಧಾರವಾಡದಿಂದ 262 ಜನರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಈ ವರ್ಷ ರಾಜ್ಯದಿಂದ 6,734 ಪ್ರಯಾಣಿಸಲು ಅವಕಾಶವಿತ್ತು. ಈ ಪೈಕಿ 70 ವರ್ಷಕ್ಕೂ ಮೇಲಿನವರಿಗೆ 459, ಏಕಾಂಗಿ ಮಹಿಳೆಯರಿಗೆ 32 ಸೀಟುಗಳು ಮೀಸಲಾಗಿದ್ದವು. ಹೆಚ್ಚುವರಿಯಾಗಿದ್ದ 3,089 ಜನ ಇನ್ನೂ ಕಾಯುವಿಕೆಯ ಪಟ್ಟಿಯಲ್ಲಿದ್ದರು. ಜುಲೈ 15ರ ವೇಳೆಗೆ ಮೊದಲ ತಂಡ ಸೌದಿ ಅರೇಬಿಯಾಗೆ
ಪ್ರಯಾಣಿಸಬೇಕಿತ್ತು.

ಬದಲಾದ ಸನ್ನಿವೇಶ: ‘ಯಾತ್ರಾರ್ಥಿಗಳಿಗೆಲ್ಲ ಹಜ್‌ ಭವನದಲ್ಲಿ ಎರಡು ದಿನಗಳ ತರಬೇತಿ ಇರುತ್ತಿತ್ತು. ಯಾತ್ರಾ
ರ್ಥಿಗಳು ಬಂದು, ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಹಜ್‌ ಭವನ ಕೋವಿಡ್‌ ಆರೈಕೆ ಕೇಂದ್ರವಾಗಿದೆ’ ಎನ್ನು
ತ್ತಾರೆ ಕರ್ನಾಟಕ ರಾಜ್ಯ ಹಜ್‌ ಸಮಿತಿ ನೋಡಲ್‌ ಅಧಿಕಾರಿ ಅಬ್ಬಾಸ್ ಷರೀಫ್‌.

ಆದಾಯಕ್ಕೂ ಹೊಡೆತ

‘ಹಜ್‌ಗೆ ತೆರಳಲು ₹2.50 ಲಕ್ಷ ಹಾಗೂ ₹2.25 ಲಕ್ಷದಎರಡು ಬಗೆಯ ಪ್ಯಾಕೇಜ್‌ಗಳಿರುತ್ತವೆ. ಅಂದಾಜಿನ ಪ್ರಕಾರ ₹168 ಕೋಟಿಗೂ ಅಧಿಕ ಆದಾಯ ನಷ್ಟವಾಗಿದೆ. ರಾಜ್ಯದ ಯಾತ್ರಿಗಳು ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್‌ ಮೂಲಕ ಚಾರ್ಟರ್ಡ್‌ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದರು’ ಎನ್ನುತ್ತಾರೆ ನೋಡಲ್‌ ಅಧಿಕಾರಿ ಅಬ್ಬಾಸ್ ಷರೀಫ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.