ಬೆಂಗಳೂರು: ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರಿಗೆ ನೀಡುವುದಕ್ಕಾಗಿ ಪ್ರತಿ ಜಿಲ್ಲೆಯಿಂದ ₹ 5 ಲಕ್ಷ ಸಂಗ್ರಹಿಸಲಾಗಿದೆ ಎಂಬ ಅಧಿಕಾರಿಗಳ ದೂರವಾಣಿ ಸಂಭಾಷಣೆಯ ರೆಕಾರ್ಡಿಂಗ್ ಕುರಿತು ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ಎಸ್) ಪಕ್ಷ ದೂರು ನೀಡಿದೆ.
ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆ ಉಪ ಆಯುಕ್ತೆ ಸಿ. ಸೆಲೆನಾ ಮತ್ತು ಅಬಕಾರಿ ನಿರೀಕ್ಷಕ ಅಜಯ್ ಅವರು ಮೊಬೈಲ್ ದೂರವಾಣಿಯಲ್ಲಿ ನಡೆಸಿರುವ ಸಂಭಾಷಣೆ ಗಮನಿಸಿದರೆ ₹5 ಲಕ್ಷ ಸಂಗ್ರಹಿಸಲಾಗುತ್ತಿದೆ ಎಂಬ ಅಂಶ ತಿಳಿಯುತ್ತದೆ. ಸಂಭಾಷಣೆಯಲ್ಲಿ ಕುಮಾರ್, ಮಂಜುನಾಥ್, ರಮೇಶ್, ನಾಗರಾಜ್, ಪಾಷ, ಶಿವಪ್ರಸಾದ್, ಸುಮತಿ, ನಾಗರಾಜಪ್ಪ ಹಾಗೂ ಕೆಲ ಅಧಿಕಾರಿಗಳ ಪದನಾಮ ಮತ್ತು ಊರುಗಳನ್ನು ಉಲ್ಲೇಖಿಸಲಾಗಿದೆ.
‘ಈ ಸಂಭಾಷಣೆ ಗಮನಿಸಿದರೆ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡು ಬರುತ್ತದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಅಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಸಂಭಾಷಣೆಯ ಸಿಡಿಯನ್ನು ಸಾಕ್ಷ್ಯವಾಗಿ ನೀಡಲಾಗುತ್ತಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಹಣ ಸಂಗ್ರಹಣೆ ಮತ್ತು ವರ್ಗಾವಣೆ ಜಾಲವನ್ನು ಭೇದಿಸಬೇಕು’ ಎಂದು ಕೆಆರ್ಎಸ್ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಸ್.ಮಂಜುನಾಥ್, ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.