ಬೆಂಗಳೂರು: ಪದಾಧಿಕಾರಿಯೊಬ್ಬರ ಸದಸ್ಯತ್ವ ರದ್ದುಗೊಳಿಸಿದ ಆರೋಪಕ್ಕೆ ಸಂಬಂಧಿಸಿದ ಸಿವಿಲ್ ದಾವೆಯಲ್ಲಿ,ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಈ ಸಂಬಂಧ ಬೆಂಗಳೂರು ಸಂಪಿಗೆ ಲೇಔಟ್ನ ಅಮರಜ್ಯೋತಿ ನಗರದ ನಿವಾಸಿ ಶಿವಕುಮಾರಸ್ವಾಮಿ (ಮಾಗಡಿ ಶಿವಕುಮಾರ್) ಸಲ್ಲಿಸಿದ್ದ ಅಸಲು ದಾವೆಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಗೆರಾಲ್ಡ್ ರುಡಾಲ್ಫ್ ಮೆಂಡೋಂನ್ಸಾ ಅವರು ಶಿವಶಂಕರಪ್ಪನವರ ಖುದ್ದು ಹಾಜರಿಗೆ ಆದೇಶಿಸಿ, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದ್ದಾರೆ.
ಪ್ರಕರಣವೇನು?: ‘ವೀರಶೈವ ಮಹಾಸಭಾದ ಅಧ್ಯಕ್ಷರ ವಿರುದ್ಧ ಅಸಭ್ಯ ಪತ್ರವೊಂದನ್ನು ಶಿವಣ್ಣ ಮಲ್ಲೇಗೌಡ ಎಂಬುವವರ ಹೆಸರಿನಲ್ಲಿ ಬರೆಯಲಾಗಿತ್ತು ಮತ್ತು ಎಲ್ಲರಿಗೂ ಈ ಪತ್ರವನ್ನು ಕಳುಹಿಸಲಾಗಿತ್ತು’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹಾಸಭಾ,ಶಿವಕುಮಾರ್ ಸ್ವಾಮಿ ಅವರಿಗೆ 2014ರ ಆಗಸ್ಟ್ 2ರಂದುಕಾರಣ ಕೇಳಿ ನೋಟಿಸ್ ನೀಡಿತ್ತು.
‘ಮಹಾಸಭಾದ ಸದಸ್ಯತ್ವದಿಂದ ನನ್ನನ್ನು ಕಿತ್ತುಹಾಕಲು ಕಾರ್ಯಕಾರಿ ಸಮಿತಿಯು 2014ರ ಆಗಸ್ಟ್ 28ರಂದು ಕೈಗೊಂಡಿರುವ ನಿರ್ಣಯವನ್ನು ರದ್ದುಗೊಳಿಸಬೇಕು ಮತ್ತು ನನ್ನ ಸದಸ್ಯತ್ವ ಪುನರ್ ಸ್ಥಾಪನೆಗೆ ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.ಅರ್ಜಿದಾರ ಶಿವಕುಮಾರಸ್ವಾಮಿ ಪರ ವಕೀಲ ಎಸ್.ಟಿ.ಪ್ರಸಾದ್ ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.