ಬೆಂಗಳೂರು: ‘ಕೋವಿಡ್ ಎಂದ ಕೂಡಲೇ ಭಯಪಟ್ಟು ಖಾಸಗಿ ಆಸ್ಪತ್ರೆಗಳನ್ನು ಹುಡುಕಬೇಕಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ಉತ್ತಮವಾದ ಚಿಕಿತ್ಸೆ ದೊರೆಯುತ್ತಿದೆ. ಆತ್ಮಸ್ಥೈರ್ಯ ಇದ್ದರೆ ಕೊರೊನಾ ವಿರುದ್ಧ ಗೆಲುವು ಸುಲಭ’ ಎಂಬುದು ಸಂಸದ ಉಮೇಶ್ ಜಾಧವ ಅವರ ಅಭಿಪ್ರಾಯ.
ಜನರ ನಡುವೆ ಕೆಲಸ ಮಾಡುವವರಿಗೆ ಕೋವಿಡ್ ಇಂದು ಸಾಮಾನ್ಯವಾಗಿದೆ. ರಾಜಕಾರಣಿಗಳಿಗೆ ಕೋವಿಡ್ ಸೋಂಕು ದೃಢಪಟ್ಟ ಕೂಡಲೇ ಪ್ರತಿಷ್ಟಿತ ಆಸ್ಪತ್ರೆಗಳನ್ನು ಹುಡುಕುತ್ತಾರೆ. ಸ್ವತಃ ವೈದ್ಯರಾದ ಸಂಸದ ಉಮೇಶ್ ಜಾಧವ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸಹಾಯಕರೊಂದಿಗೆ ಬೌರಿಂಗ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ.
‘ಮೊದಲು ಸೋಂಕು ಕಾಣಿಸಿಕೊಂಡಿದ್ದು ನನಗೆ. ನಂತರ ಪತ್ನಿ, ಮಗ (ಶಾಸಕ ಅವಿನಾಶ್ ಜಾಧವ), ಮಗಳು, ಸೊಸೆಗೆ ಸೋಂಕಿರುವುದು ದೃಢಪಟ್ಟಿತ್ತು. ಆಗಸ್ಟ್ 21ರಂದು ಕುಟುಂಬ ಸಮೇತ ಆಸ್ಪತ್ರೆಗೆ ದಾಖಲಾಗಿದ್ದೆವು. ಆಗಸ್ಟ್ 22ರಂದು ಮೂವರು ಆಪ್ತ ಸಹಾಯಕರು, ಇಬ್ಬರು ಚಾಲಕರಿಗೂ ಸೋಂಕು ದೃಢಪಟ್ಟು ಅದೇ ಆಸ್ಪತ್ರೆಗೆ ದಾಖಲಾದರು’ ಎಂದು ವಿವರಿಸಿದರು.
‘ಆ.31ರಂದು ಕುಟುಂಬ ಸಮೇತ ಆಸ್ಪತ್ರೆಯಿಂದ ಬಿಡುಗಡೆಯಾದೆವು. ಮನೆಗೆ ಬಂದ ನಂತರ ಹೋಮ್ ಕ್ವಾರಂಟೈನ್ನಲ್ಲಿ ಇದ್ದೆವು. ಆಸ್ಪತ್ರೆಯಲ್ಲಿ ಯಾವುದೇ ವಿಶೇಷ ಸೌಲಭ್ಯ ಪಡೆದಿರಲಿಲ್ಲ. ಆತ್ಮಸ್ಥೈರ್ಯ ಇತ್ತು. ಕೊರೊನಾ ಬಗ್ಗೆ ತಿಳಿವಳಿಕೆಯೂ ಇತ್ತು. ಭಯಪಡದೆ ಎದುರಿಸಿದೆವು. ಜಯಿಸಿ ಮನೆಗೆ ಮರಳಿದೆವು’ ಎಂದು ಹೇಳಿದರು.
‘ಖಾಸಗಿ ಆಸ್ಪತ್ರೆಗಳಿಗಿಂತ ಎಲ್ಲ ರೀತಿಯಲ್ಲೂ ಸರ್ಕಾರಿ ಆಸ್ಪತ್ರೆಗಳು ಉತ್ತಮವಾಗಿವೆ ಎಂಬುದಕ್ಕೆ ಬೌರಿಂಗ್ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರವೇ ಸಾಕ್ಷಿ.ಅಲ್ಲಿನ ಸಿಬ್ಬಂದಿ ಸೋಂಕಿತರ ಆರೈಕೆಗೆ ಹಗಲಿರುಳು
ಶ್ರಮಿಸುತ್ತಿದ್ದಾರೆ. ಅವರಿಗೆ ಧನ್ಯವಾದ ಹೇಳಲೇಬೇಕು’ ಎಂದು ಅವರು ಹೇಳಿದರು.
‘ಸಾಮಾನ್ಯರಿಗೆ ನೀಡುತ್ತಿದ್ದ ಊಟವನ್ನೇ 15 ದಿನ ಪಡೆದೆವು. ಎಲ್ಲವೂ ಉತ್ತಮವಾಗಿಯೇ ಇತ್ತು.ಕೋವಿಡ್ಗೆ ಹೆದರಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಒಳ್ಳೆಯದು’ ಎಂದು ಜಾಧವ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.