ಬೆಂಗಳೂರು: ‘ಕೊರೊನಾ ನಿಯಂತ್ರಣದ ಉಪಕರಣಗಳ ಖರೀದಿ ಅವ್ಯವಹಾರದ ಬಗ್ಗೆ ನನ್ನ ಆರೋಪಕ್ಕೆ ಉತ್ತರ ನೀಡಲು ಯತ್ನಿಸಿರುವ ಇಬ್ಬರು ಸಚಿವರು ಸತ್ಯ ಬಿಚ್ಚಿಡುವ ಬದಲಿಗೆ ಸುಳ್ಳನ್ನು ಮುಚ್ಚಿಡಲು ಪರದಾಡಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ‘ಈವರೆಗೆ ₹323 ಕೋಟಿ ಖರ್ಚು ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಅವರು ನೀಡಿರುವ ಲೆಕ್ಕವನ್ನು ಎಷ್ಟೇ ಕೂಡಿದರೂ ಅದು ₹100 ಕೋಟಿ ದಾಟುವುದಿಲ್ಲ. ಉಳಿದ ದುಡ್ಡಿಗೆ ಲೆಕ್ಕ ಎಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.
‘ಕೊರೊನಾ ನಿಯಂತ್ರಣಕ್ಕಾಗಿನ ಸಲಕರಣೆಗಳ ಲೆಕ್ಕವನ್ನಷ್ಟೇ ನಾನು ಕೇಳಿದ್ದಲ್ಲ. ಆಹಾರ ಧಾನ್ಯ ಮತ್ತು ಆಹಾರ ಸಾಮಗ್ರಿಗಳ ಕಿಟ್ ಮತ್ತು ಆಸ್ಪತ್ರೆಗಳಿಗೆ ಖರೀದಿಸಲಾದ ಹಾಸಿಗೆಗಳ ಬೆಲೆ, ಕ್ವಾರಂಟೈನ್ ಕೇಂದ್ರಗಳು, ಐಸೋಲೇಷನ್ ವಾರ್ಡ್ಗಳಿಗೆ ಆಗಿರುವ ಖರ್ಚಿನ ವಿವರವನ್ನೂ ಕೇಳಿದ್ದೇನೆ. ಆ ಲೆಕ್ಕ ಎಲ್ಲಿದೆ’ ಎಂದು ಕೇಳಿದ್ದಾರೆ.
‘ಪಿ.ಎಂ.ಕೇರ್ಸ್ ನಿಧಿಯಡಿ ಕೇಂದ್ರ ಸರ್ಕಾರ ತಲಾ ₹4 ಲಕ್ಷ ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ನಮ್ಮಲ್ಲಿ ₹12 ಲಕ್ಷದಿಂದ ₹18 ಲಕ್ಷ ಕೊಟ್ಟು ಖರೀದಿಸಲಾಗಿದೆ. ಇವುಗಳ ಅಂತಹ ಬೆಲೆಯಲ್ಲಿ ವ್ಯತ್ಯಾಸ ಏಕೆ’ ಎಂದು ಕೆಣಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.