ಮೈಸೂರು: ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮೈಸೂರಿನಲ್ಲಿರುವ ಗ್ಲೋಬಲ್ ಎಡ್ಯುಕೇಶನ್ ಸೆಂಟರ್ನಿಂದ 10,000 ಟ್ರೈನಿಗಳನ್ನು ಸ್ಥಳಾಂತರ ಮಾಡಲು ಇನ್ಫೋಸಿಸ್ ಸಂಸ್ಥೆ ತೀರ್ಮಾನಿಸಿದೆ.
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹೊತ್ತಲ್ಲಿ ಇಷ್ಟೊಂದು ಜನರನ್ನು ಒಟ್ಟಿಗೆ ಸ್ಥಳಾಂತರಿಸುತ್ತಿರುವುದು ಇದೇ ಮೊದಲು. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಮನೆಗೆ ಸುರಕ್ಷಿತವಾಗಿ ಕಳಿಸಲು ಇನ್ಫೋಸಿಸ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಸಹಾಯ ಬೇಡಿದೆ.
ವಿವಿಧ ರಾಜ್ಯಗಳಿಂದ ಬಂದಿರುವ ಈ ಟ್ರೈನಿಗಳು ಮನೆಗೆ ತಲುಪಿಸಲು ಕೆಎಸ್ಆರ್ಟಿಸಿ ಸಿದ್ಧವಾಗಿದ್ದು, ಮೈಸೂರಿನಲ್ಲಿರುವ ಗ್ಲೋಬಲ್ ಟ್ರೈನಿಂಗ್ ಸೆಂಟರ್ನಲ್ಲಿ 5 ಕೌಂಟರ್ಗಳನ್ನು ತೆರೆದಿದೆ. ದಕ್ಷಿಣ ಭಾರತದಲ್ಲಿರುವ ವಿವಿಧ ಭಾಗಗಳಿಗೆ ಮತ್ತು ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಈಗಾಗಲೇ ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ.
ಮೈಸೂರಿನಿಂದ ಇನ್ಫೋಸಿಸ್ ಟ್ರೈನಿಗಳನ್ನು ಸ್ಥಳಾಂತರಿಸಲು 21 ಬಸ್ಗಳನ್ನು ನಿಯೋಜಿಸಲಾಗಿದೆ.ಮೈಸೂರಿನಿಂದ ತಿರುವನಂತಪುರಂ, ಚೆನ್ನೈ,ಬೆಂಗಳೂರು, ಪುಣೆ, ಕೋಟ್ಟಯಂ ಮತ್ತು ಹೈದರಾಬಾದ್ಗೆ ಬಸ್ ಸೇವೆ ಇದೆ. ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ಬಂದ ಟ್ರೈನಿಗಳನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಪ್ರತ್ಯೇಕ ಫ್ಲೈ ಬಸ್ ಸೇವೆ ಕಲ್ಪಿಸಲಾಗಿದೆ. ಮೂರು ದಿನಗಳಲ್ಲಿ ಇದಿಷ್ಟು ಜನರನ್ನು ಸ್ಥಳಾಂತರಿಸಲಾಗುವುದು ಎಂದು ಕೆಎಸ್ಆರ್ಟಿಸಿ ಹೇಳಿದೆ.
ಬುಧವಾರ ಸಂಜೆವರೆಗೆ 434 ಟ್ರೈನಿಗಳು ಟಿಕೆಟ್ ಬುಕ್ ಮಾಡಿದ್ದು, 20 ಸ್ಥಳಗಳಿಗೆ ಹೋಗಲು ಬುಕ್ ಮಾಡಿದ ಟಿಕೆಟ್ ಮೌಲ್ಯ 3 ಲಕ್ಷದಷ್ಟಾಗಿದೆ. ಮೈಸೂರಿನಲ್ಲಿರುವ ಟ್ರೈನಿಂಗ್ ಸೆಂಟರ್ನಲ್ಲಿ ಸುಮಾರು 10,000 ಟ್ರೈನಿಗಳು ತರಬೇತಿ ಪಡೆಯುತ್ತಿದ್ದಾರೆ.
ಕೋವಿಡ್-14 ಸೋಂಕು ಮುಂಜಾಗ್ರತಾ ಕ್ರಮವಾಗಿ ಟ್ರೈನಿಗಳನ್ನು ಮನೆಗೆ ಕಳುಹಿಸಲು ಕಂಪನಿ ನಿರ್ಧರಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಕಂಪನಿಯ ಹಿರಿಯ ಅಧಿಕಾರಿಗಳು ಅಥವಾ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಲೀ ಈ ಬಗ್ಗೆ ಪ್ರಜಾವಾಣಿಗೆ ಮಾಹಿತಿ ನೀಡಲು ಸಿಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.