ಬೆಂಗಳೂರು: ಪ್ರಯಾಣಿಕರಿಲ್ಲದ ಕಾರಣ ಬಸ್ಗಳನ್ನು ರಸ್ತೆಗಿಳಿಸಲು ಹೆದರುತ್ತಿರುವ ಬಸ್ಗಳ ಮಾಲೀಕರು, ತೆರಿಗೆಯಿಂದ ಪಾರಾಗಲು ಕಳೆದ ನಾಲ್ಕು ತಿಂಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಸ್ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.
ಕೋವಿಡ್ಗೆ ಹೆದರಿ ಸಾಕಷ್ಟು ಜನ ಸ್ವಂತ ವಾಹನದಲ್ಲೇ ಸಂಚರಿಸುತ್ತಿದ್ದು, ಇದು ಬಸ್ ಮಾಲೀಕರ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಸಾರಿಗೆ ಇಲಾಖೆಗೆ ಒಪ್ಪಿಸುವ ಹಾದಿ ಹಿಡಿದಿದ್ದಾರೆ. ಬಸ್ ಕಾರ್ಯಾಚಣೆ ನಿಲ್ಲಿಸಲಾಗಿದೆ ಎಂಬುದಕ್ಕೆ ದಾಖಲೆ, ನೋಂದಣಿ ಪತ್ರ ಸೇರಿ ಎಲ್ಲಾ ದಾಖಲೆಗಳನ್ನು ಸಾರಿಗೆ ಇಲಾಖೆಗೆ ನೀಡಬೇಕು. ಇಷ್ಟು ಮಾಡಿದರೆ ಮೂರು ತಿಂಗಳಿಗೊಮ್ಮೆ ಪಾವತಿಸಬೇಕಾದ ₹48 ಸಾವಿರದಿಂದ ₹2 ಲಕ್ಷದ ವರೆಗಿನ ತೆರಿಗೆ ಉಳಿಯಲಿದೆ.
‘ಕೋವಿಡ್ ಕಾರಣದಿಂದ ಈಗಾಗಲೇ ನಾವು ಸಾಕಷ್ಟು ಕಳೆದುಕೊಂಡಿದ್ದೇವೆ.ದಿನಕ್ಕೆ ₹8 ಸಾವಿರ ಸಂಪಾದನೆ ಮಾಡುತ್ತಿದ್ದ ಬಸ್ಗಳಲ್ಲಿ ₹4 ಸಾವಿರವನ್ನೂ ದುಡಿಯಲು ಆಗುತ್ತಿಲ್ಲ. ಇದು ಇಂಧನ ವೆಚ್ಚಕ್ಕೂ ಸಾಕಾಗುತ್ತಿಲ್ಲ.ಸಾರಿಗೆ ಇಲಾಖೆಗೆ ಒಪ್ಪಿಸುವುದನ್ನು ಬಿಟ್ಟು ಬೇರೆ ದಾರಿ ಕಾಣಿಸುತ್ತಿಲ್ಲ’ ಎಂದು ಕರ್ನಾಟಕ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ ತಿಳಿಸಿದರು.
‘ರಾಜ್ಯ ಸರ್ಕಾರದ ಮಾರ್ಗದರ್ಶಿ ಸೂತ್ರದ(ಎಸ್ಒಪಿ) ಪ್ರಕಾರ ಶೇ 50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಹೀಗಿರುವಾಗ ಬಸ್ ಕಾರ್ಯಾಚರಣೆ ಕಷ್ಟ’ ಎಂದರು.
‘ಟ್ಯಾಕ್ಸಿ ಚಾಲಕರು ಕೂಡ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಟ್ಯಾಕ್ಸಿ ಮಾಲೀಕರ ಹಿತವನ್ನು ಸರ್ಕಾರ ಕಾಪಾಡಬೇಕು’ ಎಂದು ಕರ್ನಾಟಕ ಪ್ರವಾಸಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.