ADVERTISEMENT

ಕೋವಿಡ್-19 | ಮೈಸೂರಿನಲ್ಲಿ ಗುಣಮುಖರೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 4 ಮೇ 2020, 19:45 IST
Last Updated 4 ಮೇ 2020, 19:45 IST
   

ಬೆಂಗಳೂರು: ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಕೋವಿಡ್‌ –19 ಸೋಂಕಿತರನ್ನು (90) ಹೊಂದಿರುವ ಮೈಸೂರಿನಲ್ಲಿ 79 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದ್ದರೂ ಮೈಸೂರಿನಲ್ಲಿ ಎಲ್ಲರೂ ಚೇತರಿಸಿಕೊಂಡು ಮನೆ ಸೇರಿರುವುದು ಸಮಾಧಾನದ ಸಂಗತಿಯಾಗಿದೆ.

‘ಹೆಚ್ಚಿನ ಸಂಖ್ಯೆ ಸೋಂಕಿತರು ಆಸ್ಪತ್ರೆಯಿಂದ ಸುರಕ್ಷಿತವಾಗಿ ಮನೆ ಸೇರಿರುವುದರಿಂದಾಗಿ ಮೈಸೂರು ಜಿಲ್ಲಾಡಳಿತ ಒಂದಿಷ್ಟು ನಿರಾಳವಾಗಿದೆ. ಗಡಿ ಭಾಗದಿಂದ ಸೋಂಕಿತರು ಒಳಗೆ ಬರದಂತೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ಸೂಚಿಸಲಾಗುವುದು’ ಎಂದು ರಾಜ್ಯ ಸರ್ಕಾರದ ಕೋವಿಡ್ ವಕ್ತಾರ, ಸಚಿವ ಎಸ್‌.ಸುರೇಶ್‌ ಕುಮಾರ್ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘533ನೇ ಸಂಖ್ಯೆಯ ರೋಗಿಗೆ 25 ಮಂದಿಯೊಂದಿಗೆ ಪ್ರಾಥಮಿಕ ಹಾಗೂ 125 ಮಂದಿಯೊಂದಿಗೆ ದ್ವಿತೀಯ ಸಂಪರ್ಕ ಇದ್ದರೆ, 556ನೇ ಸಂಖ್ಯೆಯ ರೋಗಿಗೆ 12 ಪ್ರಾಥಮಿಕ ಮತ್ತು 34 ದ್ವಿತೀಯ ಸಂಪರ್ಕ ಇತ್ತು, ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದಾದ್ಯಂತ 25,684 ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದು, ಈವರೆಗೆ 79,193 ಮಾದರಿಗಳ ಪರೀಕ್ಷೆ ನಡೆದಿದೆ. ಸೋಮವಾರ ಒಂದೇ ದಿನ 4,295 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ’ ಎಂದರು.

ADVERTISEMENT

ವಾರಕ್ಕೊಮ್ಮೆ ವಲಯ ಪರಿಷ್ಕರಣೆ: ‘ಕೇಂದ್ರ ಸರ್ಕಾರ ಸೋಂಕಿತರ ಪ್ರಮಾಣ ಸಹಿತ ನಾಲ್ಕು ಮಾನದಂಡಗಳನ್ನು ಇಟ್ಟುಕೊಂಡು ವಲಯಗಳನ್ನು ಗುರುತಿಸುತ್ತದೆ. ವಾರಕ್ಕೊಮ್ಮೆ ಅದರ ಪರಿಷ್ಕರಣೆ ನಡೆಯುತ್ತದೆ. ಈಗಿನ ಮೂರು ಜಿಲ್ಲೆಗಳೊಂದಿಗೆ ಇನ್ನೂ ಕೆಲವು ಜಿಲ್ಲೆಗಳು ಮುಂದಿನ ವಾರ ಕೆಂಪು ವಲಯಕ್ಕೆ ಸೇರ್ಪಡೆಯಾಗಬಹುದು. ಕೆಲವು ಹಸಿರು ಅಥವಾ ಕಿತ್ತಳೆ ವಲಯಕ್ಕೆ ಸೇರಿಕೊಳ್ಳಬಹುದು’ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.