ಬೆಂಗಳೂರು: ಕೋವಿಡ್–19 ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಸ್ಥಳ ಪರಿಶೀಲನೆ ನಡೆಸಲು ಉದ್ದೇಶಿಸಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವಿಧಾನಸಭಾಧ್ಯಕ್ಷರು ತಡೆಯಾಜ್ಞೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆಯಲ್ಲಿ ದೂರುಗಳ ವಿಚಾರವಾಗಿ ತನಿಖೆ ನಡೆಸಲು ಮತ್ತು ಆಸ್ಪತ್ರೆಗಳ ಪರೀಶೀಲನೆ ನಡೆಸಲು ತೀರ್ಮಾನ ತೆಗೆದುಕೊಂಡಿತ್ತು.
ವಿವಿಧ ಆಸ್ಪತ್ರೆಗಳು, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ಗುರುವಾರ ಭೇಟಿಯನ್ನು ನಿಗದಿ ಮಾಡಲಾಗಿತ್ತು. ವಿಧಾನಸಭಾಧ್ಯಕ್ಷರು ಅನುಮತಿ ನಿರಾಕರಿಸಿರುವುದರಿಂದ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಹಿನ್ನಡೆ ಉಂಟಾಗಿದೆ.
ಸಂವಿಧಾನ ಬುಡಮೇಲು ಕೃತ್ಯ
ಭ್ರಷ್ಟಾಚಾರದ ತನಿಖೆ ನಡೆಸಲು ವಿಧಾನಸಭಾಧ್ಯಕ್ಷರು ತಡೆ ನೀಡಿರುವುದು ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯ ಬುಡಮೇಲು ಕೃತ್ಯ ಎಂದು ಎಚ್.ಕೆ.ಪಾಟೀಲ ಕಿಡಿಕಾರಿದ್ದಾರೆ.
ವಿಧಾನಮಂಡಲದ ಸಮಿತಿಗಳ ಅಧಿಕಾರ ಮೊಟಕು ಮಾಡುವ ಪ್ರಯತ್ನವನ್ನು ತಕ್ಷಣ ಕೈಬಿಡಬೇಕು. ಈ ಸಂಬಂಧ ಸಭಾಧ್ಯಕ್ಷರು ಲಘು ಪ್ರಕಟಣೆ 104 ನ್ನು ಹಿಂದಕ್ಕೆ ಪಡೆದು, ಭ್ರಷ್ಟಾಚಾರ ಪೋಷಿಸುವ ಕ್ರಮದ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.