ADVERTISEMENT

ಆಹಾರ ಸಿಗದೇ ಸಾವಿಗೀಡಾದ ಮಹಿಳೆ: ಎಚ್‌ಡಿಕೆ ತೀವ್ರ ಬೇಸರ, ಸರ್ಕಾರಕ್ಕೆ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 14:12 IST
Last Updated 7 ಏಪ್ರಿಲ್ 2020, 14:12 IST
   

ಬೆಂಗಳೂರು: ಹೊಟ್ಟೆಪಾಡಿಗೆಂದು ಬೆಂಗಳೂರಿಗೆ ಕಟ್ಟಡ ಕಾರ್ಮಿಕಳಾಗಿ ಬಂದಿದ್ದ ಸಿಂಧನೂರು ನಿವಾಸಿ ಗಂಗಮ್ಮ (ಪೂಜಾ) ಅವರಿಗೆ ದುಡಿದ ಹಣವನ್ನು ಕೊಡದೇ ಗುತ್ತಿಗೆದಾರ ವಂಚಿಸಿದ ಕಾರಣ ಮೂರ್ನಾಲ್ಕು ದಿನ ಹೊಟ್ಟೆಗೆ ಅನ್ನವಿಲ್ಲದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, 'ಹುಟ್ಟೂರು ಸೇರಬೇಕೆಂಬ ಆಸೆಯೊಂದಿಗೆ ಹಸಿವಿನಲ್ಲೇ ರಾಯಚೂರಿನತ್ತ ಹೆಜ್ಜೆ ಹಾಕುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಎಂಬುವರು ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟರೆಂಬ ಸುದ್ದಿ ತೀವ್ರ ನೋವುಂಟು ಮಾಡಿತು. ಗಂಗಮ್ಮ ಅವರ ಈ ಪ್ರಕರಣ ವಲಸೆ ಕಾರ್ಮಿಕರು, ಕೂಲಿಕಾರ್ಮಿಕರ ಬದುಕನ್ನು ಸಾಕ್ಷಿಕರಿಸುವಂತಿದೆ' ಎಂದಿದ್ದಾರೆ.

ADVERTISEMENT

ಗಂಗಮ್ಮ ಪ್ರಕರಣದಲ್ಲಿ ಸರ್ಕಾರದ್ದು ತಪ್ಪಿದೆ ಎಂದಿರುವ ಎಚ್‌ಡಿಕೆ, 'ಗಂಗಮ್ಮ ಪ್ರಕರಣದಲ್ಲಿ ಕೂಲಿ ನೀಡದ ಗುತ್ತಿಗೆದಾರನೊಬ್ಬನದ್ದೇ ತಪ್ಪಿಲ್ಲ. ಸರ್ಕಾರದ್ದೂ ತಪ್ಪಿದೆ. ಕಾರ್ಮಿಕರ ಇಲಾಖೆಯಲ್ಲಿ ₹8000 ಕೋಟಿ ಹಣವಿದೆ. ಆದರೆ ಇಂಥವರಿಗೆ ವಿನಿಯೋಗವಾಗುತ್ತಿಲ್ಲವೇಕೆ? ಆಕೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರಾಶ್ರಿತರ ಕ್ಯಾಂಪ್‌ನಲ್ಲಿ ಇರಿಸಿತ್ತಂತೆ. ಕ್ಯಾಂಪ್‌ನಲ್ಲಿದ್ದೂ ಆಕೆಗೆ ಆಹಾರ, ಚಿಕಿತ್ಸೆ ಸಿಗಲಿಲ್ಲ ಏಕೆ?' ಎಂದು ಪ್ರಶ್ನಿಸಿದ್ದಾರೆ.

ಲಾಕ್‌ಡೌನ್‌ನಿಂದ ಕೂಲಿಕಾರ್ಮಿಕರು ಬೀದಿಗೆ ಬಂದಿದ್ದಾರೆ ಎಂದಿರುವ ಮಾಜಿ ಸಿಎಂ, 'ಲಾಕ್‌ಡೌನ್‌ ಮಧ್ಯಮ ವರ್ಗ ಮತ್ತು ಶ್ರೀಮಂತರನ್ನು ಮನೆಯಲ್ಲಿ ಬಂಧಿಸಿಟ್ಟಿರಬಹುದು. ಆದರೆ, ಕೂಲಿಕಾರ್ಮಿಕರನ್ನು, ವಲಸಿಗರನ್ನು ಬೀದಿಗೆ ತಳ್ಳಿದೆ. ಸರ್ಕಾರ ಕೂಡಲೇ ಇಂಥವರ ಕಡೆಗೂ ಗಮನ ಹರಿಸಬೇಕು. ದೂರದೂರುಗಳಿಗೆ ಹೆಜ್ಜೆ ಹಾಕಿರುವವರ ಬದುಕು ಬವಣೆನ್ನು ನೋಡಬೇಕು. ಮೃತ ಗಂಗಮ್ಮನ ಕುಟುಂಬಕ್ಕೆ ಪರಿಹಾರ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

ದೇಶ ಕಟ್ಟುವ ಕೆಲಸ ಮಾಡಿದವರು ಸಾವಿಗೆ ಶರಣಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ, 'ವಿದೇಶದಿಂದ ಬಂದ ಸೋಂಕು ಅತ್ತ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಬಾಧಿಸುತ್ತಿದೆ. ಇತ್ತ, ದೇಶದ ಅಭಿವೃದ್ಧಿಗೆ ಹೆಗಲಾದವರು, ದೇಶ ಕಟ್ಟಿದವರು, ಕಟ್ಟುವ ಕೆಲಸಕ್ಕೆ ಮಣ್ಣು, ಕಲ್ಲು, ಇಟ್ಟಿಗೆ ಹೊತ್ತವರು ತಾವು ಮಾಡದ ತಪ್ಪಿಗೆ ಅನ್ನಾಹಾರಗಳಿಲ್ಲದೇ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.