ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೃತರ ಸಂಖ್ಯೆ ಮತ್ತೆ ಏರಿದೆ. ಸೋಂಕಿತರ ಪೈಕಿ ಸೋಮವಾರ 17 ಮಂದಿ ಅಸುನೀಗಿದ್ದಾರೆ. ಮರಣ ಪ್ರಮಾಣ ದರವು ಶೇ 1.74ಕ್ಕೆ ಹೆಚ್ಚಿದೆ.
ಹಿಂದಿನ 24 ಗಂಟೆಗಳಲ್ಲಿ 973 ಮಂದಿಗೆ ಸೋಂಕು ತಗುಲಿದೆ. ಕೋವಿಡ್ ಪೀಡಿತರ ಒಟ್ಟು ಸಂಖ್ಯೆಯು 29.56 ಲಕ್ಷಕ್ಕೆ ಹಿಗ್ಗಿದೆ. ಸೋಂಕು ದೃಢ ಪ್ರಮಾಣವು ಶೇ 0.69ರಷ್ಟಿದೆ.
ಸೋಮವಾರ 1,071 ಜನರಿಗೆ ಕಾಯಿಲೆ ವಾಸಿಯಾಗಿದ್ದು ಗುಣಮುಖರ ಒಟ್ಟು ಸಂಖ್ಯೆ 29.01 ಲಕ್ಷಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿದಿವೆ. ಸದ್ಯ 17,386 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಹೊಸದಾಗಿ 243 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೇರಳಕ್ಕೆ ಹೊಂದಿಕೊಂಡಂತಿರುವ ಗಡಿ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ (258) ಹಾಗೂ ಮೈಸೂರಿನಲ್ಲಿ (78) ಹೊಸ ಪ್ರಕರಣಗಳು ಏರಿವೆ. ಕೊಡಗು ಜಿಲ್ಲೆಯಲ್ಲಿ(52) ಸೋಂಕಿತರ ಸಂಖ್ಯೆ ತುಸು ಇಳಿಕೆ ಕಂಡಿದೆ. ಉಡುಪಿಯಲ್ಲೂ (53) ಐವತ್ತಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಬಾಗಲಕೋಟೆ, ಗದಗ, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ. 11 ಜಿಲ್ಲೆಗಳಲ್ಲಿ ಪ್ರಕರಣಗಳು ಒಂದಂಕಿಯಷ್ಟಿವೆ.
ಕೋವಿಡ್ ಪೀಡಿತರ ಪೈಕಿ ಬೆಂಗಳೂರಿನಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಹಾವೇರಿಯಲ್ಲಿ ತಲಾ ಇಬ್ಬರು ಮೃತರಾಗಿದ್ದಾರೆ. ಬಾಗಲಕೋಟೆ, ಹಾಸನ, ತುಮಕೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ.ರಾಜ್ಯದಲ್ಲಿ ಈವರೆಗೆ ಮೃತರಾದವರ ಸಂಖ್ಯೆ 37,426ಕ್ಕೆ ಹೆಚ್ಚಿದೆ.
ಕೋವಿಡ್ ಪರೀಕ್ಷೆ ಇಳಿಮುಖವಾಗಿದ್ದು ಒಂದು ದಿನದಲ್ಲಿ 1.39 ಲಕ್ಷ ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.