ADVERTISEMENT

ಕೋವಿಡ್‌ | ವೃದ್ಧರು, ಗರ್ಭಿಣಿಯರಿಗೆ ಮಾಸ್ಕ್‌ ಕಡ್ಡಾಯ; ರಾಜ್ಯ ಸರ್ಕಾರದ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 15:35 IST
Last Updated 26 ಮೇ 2025, 15:35 IST
ಮುಖಗವಸು (ಮಾಸ್ಕ್)
ಮುಖಗವಸು (ಮಾಸ್ಕ್)   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ವೃದ್ಧರು, ಗರ್ಭಿಣಿಯರು, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶ ಸಮಸ್ಯೆ ಇರುವ ನಾಗರಿಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ ಧರಿಸುವಂತೆ ಸರ್ಕಾರ ಸೂಚಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಮಾರ್ಗಸೂಚಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.

ಸದ್ಯಕ್ಕೆ ಆತಂಕಪಡುವ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಆದರೆ, ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಕ್ರಮ ಕೈಗೊಳ್ಳಲು ಆಡಳಿತವನ್ನು ಸಜ್ಜುಗೊಳಿಸಬೇಕು. ವಿಮಾನ ನಿಲ್ದಾಣದಿಂದ ಹೊರಬರುವ ಪ್ರಯಾಣಿಕರ ಮೇಲೆ ಕಣ್ಗಾವಲು ಇಡಬೇಕು. ರಾಜ್ಯ ಪ್ರವೇಶಿಸುವವರ ಆರೋಗ್ಯ ತಪಾಸಣೆಗಾಗಿ ಪ್ರತ್ಯೇಕ ಘಟಕಗಳನ್ನು ತೆರೆಯಬೇಕು. ವೆಂಟಿಲೇಟರ್‌, ಆಮ್ಲಜನಕ, ಔಷಧ ಸೇರಿದಂತೆ ಅಗತ್ಯ ಪರಿಕರಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ADVERTISEMENT

ಸಾರ್ವಜನಿಕರಿಗೆ ನೆರವಾಗಲು ಕೋವಿಡ್‌ ಸಹಾಯವಾಣಿ ತೆರೆಯಬೇಕು. ಪ್ರತಿ ವಾರ ಅಥವಾ ಮೂರು ದಿನಕ್ಕೆ ಒಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸಬೇಕು. ಜನರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಬೇಕು. ಸಮಸ್ಯೆ ಇರುವ ಗರ್ಭಿಣಿಯರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಬಾರದು. ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ಸೂಚಿಸಿದರು.

ಸೋಂಕು ಪತ್ತೆ

ಶಿವಮೊಗ್ಗ: ನಗರದಲ್ಲಿ ಸೋಮವಾರ 75 ವರ್ಷ ವಯಸ್ಸಿನ ವೃದ್ಧರೊಬ್ಬರಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಮತ್ತೊಂದು ಶಂಕಿತ ಕೋವಿಡ್‌ ಪ್ರಕರಣದಲ್ಲಿ 2 ತಿಂಗಳ ಮಗುವಿನ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಸಿಮ್ಸ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

‘ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಸೋಂಕು ದೃಢಪಟ್ಟಿರುವ ವೃದ್ಧ ಹಾವೇರಿ ತಾಲ್ಲೂಕಿನವರು. ಮಗುವಿನ ಪರೀಕ್ಷಾ ವರದಿಯ ಫಲಿತಾಂಶ ಬುಧವಾರ ಅಧಿಕೃತಗೊಳ್ಳಲಿದೆ’ ಎಂದು ಡಿಎಚ್‌ಒ ಡಾ.ನಟರಾಜ್ ‍‍ಪ್ರತಿಕ್ರಿಯಿಸಿದರು.

ಶೀತ, ಜ್ವರ: ಶಾಲೆಗೆ ಬೇಡ ಮಕ್ಕಳು
ಮಕ್ಕಳಿಗೆ ಶೀತ, ಜ್ವರ, ಕೆಮ್ಮು ಮೊದಲಾದ ಲಕ್ಷಣಗಳು ಕಂಡು ಬಂದರೆ ಶಾಲೆಗೆ ಕಳಿಸಬಾರದು ಎಂದು ಸಂದೇಶ ನೀಡಬೇಕು. ಮಕ್ಕಳು, ಪೋಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು. ಶಾಲಾ ಕಾಲೇಜು ಮಂಡಳಿಗಳು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಸಮಸ್ಯೆ ಕಂಡುಬಂದ ತಕ್ಷಣ ಪೋಷಕರಿಗೆ ಮಾಹಿತಿ ನೀಡಬೇಕು ಎಂದರು. ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
5 ಸಾವಿರ ಆರ್‌ಟಿಪಿಸಿಆರ್ ಕಿಟ್‌ 
ಕೋವಿಡ್‌ ಪರೀಕ್ಷಾ ಕಿಟ್‌ಗಳನ್ನು ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗಿದೆ. 5 ಸಾವಿರ ಆರ್‌ಟಿಪಿಸಿಆರ್‌ ಕಿಟ್‌ಗಳನ್ನು ಖರೀದಿ ಮಾಡಲಾಗಿದ್ದು, ಮಂಗಳವಾರ (ಮೇ 27) ಸಂಜೆ ಒಳಗೆ ಆಸ್ಪತ್ರೆಗಳಿಗೆ ತಲುಪಲಿವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು. ಕೋವಿಡ್ ಒಮೈಕ್ರಾನ್ ಜೆಎನ್–1 ತಳಿಯಾಗಿದ್ದು, ಸೌಮ್ಯ ಲಕ್ಷಣ ಹೊಂದಿದೆ. ಉಸಿರಾಟ, ಮತ್ತು ಹೃದಯ ಕಾಯಿಲೆ ಇರುವವರಿಗೆ ವಿಆರ್‌ಡಿಎಲ್‌ ಟೆಸ್ಟಿಂಗ್ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ರೆಮ್ಡಿಸಿವಿರ್‌ ಇಂಜೆಕ್ಷನ್ ಖರೀದಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.