ಬಳ್ಳಾರಿ: ‘ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಸೇರಿ 108 ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವುದು ಆತಂಕಕಾರಿ ಸಂಗತಿ’ ಎಂದು ಉಸ್ತುವಾರಿ ಸಚಿವ ಆನಂದ್ ಸಿಂಗ್ ವಿಷಾದಿಸಿದರು.
ನಗರದಲ್ಲಿ ಮಂಗಳವಾರ ಕೋವಿಡ್–19 ನಿಯಂತ್ರಣದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಸರ್ಕಾರಿ ವೈದ್ಯರಷ್ಟೇ ಅಲ್ಲದೇ, ಖಾಸಗಿ ವೈದ್ಯರಿಗೂ ಸೋಂಕು ತಗುಲಿರುವುದು ಸನ್ನಿವೇಶವನ್ನು ಗಂಭೀರಗೊಳಿಸಿದೆ. ಚಿಕಿತ್ಸೆಗೆ ಸಹಕಾರಿಯಾಗಿರುವ ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು ಮತ್ತು ಡಿ ಗ್ರೂಪ್ ನೌಕರರಿಗೂ ಸೋಂಕು ತಗುಲಿರುವುದರಿಂದ ಆಸ್ಪತ್ರೆಯ ಎಲ್ಲರೂ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು’ ಎಂದು ಸಲಹೆ ನೀಡಿದರು.
‘ಒಬ್ಬಿಬ್ಬರು ವೈದ್ಯರು ಹಾಗೂ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ಸುಮ್ಮನಿರುವಂತಿಲ್ಲ. ಸೋಂಕಿತ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಪ್ರಥಮ ಹಂತದ ಸಂಪರ್ಕದಲ್ಲಿರುವವರೆಲ್ಲರನ್ನೂ ವಿಶೇಷ ನಿಗಾದಲ್ಲಿಡಬೇಕು’ ಎಂದು ಸೂಚಿಸಿದರು.
‘ರೋಗಲಕ್ಷಣಗಳಿಲ್ಲದವರನ್ನು ದಾಖಲಿಸಲಾಗುತ್ತಿರುವ ಸಾಂಸ್ಥಿಕ ಕ್ವಾರಂಟೈನ್ಗಳಲ್ಲಿ ಗುಣಮಟ್ಟದ ಆಹಾರ ಕೊಡುತ್ತಿಲ್ಲ. ಸ್ವಚ್ಛತೆ ನಿರ್ವಹಣೆ ಸರಿ ಇಲ್ಲ ಎಂಬ ದೂರುಗಳು ಬರುತ್ತಿವೆ. ಕೂಡಲೇ ಆ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
‘ಕೊರೊನಾ ಬಗ್ಗೆ ಭಯಪಡುವುದಕ್ಕಿಂತಲೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ; ಆದರೆ ಜಿಲ್ಲೆಯಲ್ಲಿ ಭಯಪಡಿಸುವವರೇ ಹೆಚ್ಚು ಕ್ರಿಯಾಶೀಲರಾಗಿರುವುದು ದುಃಖದ ಸಂಗತಿ. ಕೊರೊನಾ ಹಾಗೂ ಸೋಂಕಿತರ ವಿಷಯದಲ್ಲಿ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ’ ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಇದ್ದರು.
ಆಸ್ಪತ್ರೆಗೆ ಭೇಟಿ: ಸಭೆಯ ಬಳಿಕ ಸಚಿವರು ಅಧಿಕಾರಿಗಳೊಂದಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಸೋಂಕಿತರು ಇರುವ ವಾರ್ಡ್ಗಳ ಹೊರಗೆ ನಿಂತು ಸಚಿವರುಅವರ ಅಹವಾಲು ಆಲಿಸಿದರು. ‘ಊಟೋಪಚಾರ ಉತ್ತಮವಾಗಿದೆ. ಆದರೆ ಶೌಚಾಲಯ ಸ್ವಚ್ಛತೆ ಸಮರ್ಪಕವಾಗಿಲ್ಲ’ ಎಂದು ಸೋಂಕಿತರು ದೂರಿದರು. ದಿನಕ್ಕೆ ಮೂರು ಬಾರಿ ಶೌಚಾಲಯ ಸ್ವಚ್ಛಗೊಳಿಸುವಂತೆ ಸಚಿವರು ಸೂಚಿಸಿದರು.
ಟ್ರಾಮಾಕೇರ್ಗೆ ಭೇಟಿ: ನಂತರ ಸಚಿವರು ಸುವಿಶೇಷ ಅಪಘಾತ ಆಸ್ಪತ್ರೆ– ಸೂಪರ್ ಸ್ಪೆಷಾಲಿಟಿ ಟ್ರಾಮಾ ಕೇರ್ ಸೆಂಟರ್ಗೆ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದರು. ‘ಸಿದ್ಧತೆಗಳು ಪೂರ್ಣಗೊಳ್ಳದೇ ಇರುವುದರಿಂದ ಜುಲೈ 15ರ ಬದಲಿಗೆ ತಿಂಗಳ ಅಂತ್ಯದಲ್ಲಿ ಸೆಂಟರ್ ಅನ್ನು ಉದ್ಘಾಟಿಸಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಜಿಂದಾಲ್: 510 ಸೋಂಕಿತರು
‘ಇದುವರೆಗೆ ಜಿಂದಾಲ್ನಲ್ಲಿ 510 ಸೋಂಕಿತರು ಕಂಡು ಬಂದಿದ್ದಾರೆ. ಆ ಪ್ರದೇಶ ವ್ಯಾಪ್ತಿಯಲ್ಲಿ 66 ಸೇರಿದಂತೆ ಇಡೀ ಜಿಲ್ಲೆಯಲ್ಲಿ 301 ಕಂಟೈನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಭೆಯಲ್ಲಿ ಮಾಹಿತಿ ನೀಡಿದರು.
‘ಜಿಲ್ಲೆಯಲ್ಲಿ ಸೋಂಕು ದೃಢಪಟ್ಟವರೊಂದಿಗೆ 8988 ಮಂದಿ ಪ್ರಥಮ ಹಂತದ ಸಂಪರ್ಕ ಹೊಂದಿದ್ದಾರೆ. 3,472 ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿದ್ದಾರೆ’ ಎಂದರು.
‘ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ಶುಶ್ರೂಷಕರು ಹಾಗೂ ಗ್ರೂಪ್ ಡಿ ನೌಕರರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು ವೈದ್ಯರ ಹುದ್ದೆಗೆ ಒಂದೇ ಒಂದು ಅರ್ಜಿ ಕೂಡ ಬರಲಿಲ್ಲ’ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.