ADVERTISEMENT

ಕೋವಿಡ್: ಪರೀಕ್ಷೆ ಹೆಚ್ಚಳವಿಲ್ಲ- ಡಿ. ರಂದೀಪ್

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:25 IST
Last Updated 29 ನವೆಂಬರ್ 2022, 16:25 IST
ಡಿ. ರಂದೀಪ್
ಡಿ. ರಂದೀಪ್   

ಬೆಂಗಳೂರು: ‘ಹವಾಮಾನ ವೈಪರೀತ್ಯದಿಂದ ಕೆಲವರು ಜ್ವರ ಪೀಡಿತರಾಗುತ್ತಿದ್ದಾರೆ. ಕೋವಿಡ್ ಬಗೆಗೆ ಆತಂಕ ಪಡಬೇಕಾದ ಅಗತ್ಯವಿಲ್ಲ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.

‘ಚೀನಾದಲ್ಲಿ ಸಾಮೂಹಿಕವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಆದ್ದರಿಂದ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಒಬ್ಬರು ಸೋಂಕಿತರಾದರೆ ಕಟ್ಟಡದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೇಶದಲ್ಲಿ ಈ ಪರೀಕ್ಷಾ ಪದ್ಧತಿಯನ್ನು ಕೈಬಿಡಲಾಗಿದೆ. ಈಗ ಕೆಲ ಪ್ರಕರಣ ಪತ್ತೆಯಾದರೂ ಸೋಂಕಿತರು ಲಕ್ಷಣರಹಿತರಾಗಿರುತ್ತಿದ್ದಾರೆ. ಆದ್ದರಿಂದ ಸೋಂಕಿತರ ಸಂಪರ್ಕಿತರಿಗೆ ಪರೀಕ್ಷೆ ಮಾಡುತ್ತಿಲ್ಲ. ಪರೀಕ್ಷೆಗಳ ಸಂಖ್ಯೆಯನ್ನೂ ಇಳಿಕೆ ಮಾಡಿದೆ’ ಎಂದು ಹೇಳಿದರು.

‘ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ), ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳ ಮೇಲೆ ನಿಗಾ ಇಡಲಾಗುತ್ತಿದೆ. ಈ ಪ್ರಕರಣಗಳು ಹೆಚ್ಚಳವಾಗಿಲ್ಲ. ಕೋವಿಡ್ ಸಂಬಂಧಿತ ಆಸ್ಪತ್ರೆ ದಾಖಲಾತಿ ಬೆರಳಣಿಕೆಯಷ್ಟಿದೆ. ಕೋವಿಡ್ ಚಿಕಿತ್ಸಾ ವಿಧಾನವೂ ಬದಲಾಗಿದೆ. ಇದರಿಂದಾಗಿ ಮರಣವೂ ನಿಯಂತ್ರಣಕ್ಕೆ ಬಂದಿದೆ. ಹಾಗಾಗಿ, ಇಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ಪರೀಕ್ಷೆಯಲ್ಲಿಯೂ ಬದಲಾವಣೆಯಿಲ್ಲ’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.