ADVERTISEMENT

ಜನರ ಮೇಲೆ ಯುದ್ಧ ನಡೆಸಿದವರ ಪರ ನಿಲ್ಲಬೇಕೆ: ಸಿಪಿಎಂ ಪ್ರಶ್ನೆ

ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆಗೆ 15 ಪ್ರಶ್ನೆಗಳನ್ನು ಕೇಳಿದ ಸಿಪಿಎಂ

​ಪ್ರಜಾವಾಣಿ ವಾರ್ತೆ
Published 21 ಮೇ 2020, 2:58 IST
Last Updated 21 ಮೇ 2020, 2:58 IST
ಆರ್ ಎಸ್ ಎಸ್ ದತ್ತಾತ್ರೇಯ ಹೊಸಬಾಳೆಗೆ ಸಿಪಿಐ 15 ಪ್ರಶ್ನೆ
ಆರ್ ಎಸ್ ಎಸ್ ದತ್ತಾತ್ರೇಯ ಹೊಸಬಾಳೆಗೆ ಸಿಪಿಐ 15 ಪ್ರಶ್ನೆ   

ಬೆಂಗಳೂರು: ‌ಯುದ್ಧದ ವೇಳೆ ಸರ್ಕಾರದ ಬೆನ್ನಿಗೆ ಪ್ರತಿಪಕ್ಷಗಳು ನಿಲ್ಲಬೇಕು ಎಂದು ಪ್ರತಿಪಾದಿಸಿರುವ ಆರ್‌ಎಸ್‌ಎಸ್‌ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರಿಗೆ ಸಿಪಿಎಂ (ಭಾರತ ಕಮ್ಯುನಿಸ್ಟ್ ಪಕ್ಷ) ಬೆಂಗಳೂರು ಉತ್ತರ ಮತ್ತು
ದಕ್ಷಿಣ ಜಿಲ್ಲಾ ಸಮಿತಿ 15 ಪ್ರಶ್ನೆಗಳನ್ನು ಕೇಳಿದೆ.

‘ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಬಾರದೆ ಅವರ ಮೇಲೆಯೇ ಯುದ್ಧ ನಡೆಸುವ ಸರ್ಕಾರಗಳ ಪರ ನಿಲ್ಲಲು ಹೇಗೆ ಸಾಧ್ಯ. ಸಂತ್ರಸ್ತರ ಪರಿಹಾರ ಕಾರ್ಯದಲ್ಲೂ ರಾಜಕೀಯ ಮಾಡುವ, ನೈಜ ಫಲಾನುಭವಿಗಳನ್ನು ಬಿಟ್ಟು ಮತದಾರರಿಗೆ ಮಾತ್ರ ದಿನಸಿ ಕಿಟ್ ವಿತರಿಸಿದ ಸರ್ಕಾರವನ್ನು ಬೆಂಬಲಿಸಬೇಕಾ’ ಎಂದು ಪಕ್ಷದದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್. ಉಮೇಶ್ ಮತ್ತು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿಎನ್. ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.

‘ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ನೀಡಬೇಕು ಮತ್ತು ಕೆಲಸದಿಂದ ತೆಗೆಯಬಾರದು ಎಂದು ಆದೇಶ ಹೊರಡಿಸಿ ನಂತರ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸದೆ ಆದೇಶ ಹಿಂದಕ್ಕೆ ಪಡೆಯಲಾಯಿತು. ವೇತನ ನೀಡದ, ಕೆಲಸದಿಂದ ತೆಗೆಯುವ ಮಾಲೀಕರ ವಿರುದ್ಧದೂರು ಸ್ವೀಕರಿಸಲು ಆದೇಶಿಸಿದ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಲಾಯಿತು. ಈ ಕಾರಣಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರ ನಿಲ್ಲಬೇಕಾ’ ಎಂದು ಕೇಳಿದ್ದಾರೆ.

ADVERTISEMENT

‘ವಲಸೆ ಕಾರ್ಮಿಕರಿಗೆ ಉಚಿತ ರೈಲು ವ್ಯವಸ್ಥೆ ಮಾಡದೆ ದಯನೀಯವಾಗಿ ಸಾಯುವಂತೆ ಮಾಡಿದ, ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿದ ಕಾರಣಕ್ಕೆ ಬೆಂಬಲಿಸಬೇಕಾ?’ ಎಂದಿದ್ದಾರೆ.

‘ಕೋವಿಡ್–19 ಅನ್ನು ಧರ್ಮಕ್ಕೆ ಅಂಟಿಸಿ ಪ್ರಚಾರಪಡಿಸುವ ಮೂಲಕ ಮಾಧ್ಯಮಗಳು ಜನರ ನಡುವೆ ಕಂದಕ ಸೃಷ್ಟಿಸಿದವು. ಅದಕ್ಕೆ
ಪೂರಕ ಹೇಳಿಕೆಗಳನ್ನು ತಮ್ಮದೇ ನಾಯಕರು ನೀಡಿದರೂ ನಿಯಂತ್ರಣ ಮಾಡಲಿಲ್ಲ. ಲಾಕ್‌ಡೌನ್ ಪರಿಸ್ಥಿತಿ
ಬಳಸಿ ಕಾರ್ಮಿಕರ ಹಕ್ಕುಗಳನ್ನು ಮೊಟುಕುಗೊಳಿಸುವ, ಕೆಲಸದ ಅವಧಿ ಹೆಚ್ಚಳ ಮಾಡುವ ಸಂಬಂಧ ಕಾರ್ಮಿಕ ಕಾನೂನುಗಳನ್ನು
ಅಮಾನತ್ತುಗೊಳಿಸುವ ಸುಗ್ರೀವಾಜ್ಞೆ ಹೊರಡಿಸುವ ಸರ್ಕಾರವನ್ನು ಬೆಂಬಲಿಸಬೇಕಾ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.