ADVERTISEMENT

ಪುಷ್ಪಗಿರಿ ಚಾರಣ: ಬೆಂಗಳೂರಿನ ಖಾಸಗಿ ಉದ್ಯೋಗಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 15:25 IST
Last Updated 16 ಸೆಪ್ಟೆಂಬರ್ 2019, 15:25 IST
ಸಂತೋಷ್ 
ಸಂತೋಷ್    

ಸುಬ್ರಹ್ಮಣ್ಯ : ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ತೆರಳಿದ ಬೆಂಗಳೂರು ಮೂಲದ 12 ಮಂದಿ ಚಾರಣಿಗರ ಪೈಕಿ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಸಂತೋಷ್ ಭಾನುವಾರ ಗಿರಿಗದ್ದೆಯಲ್ಲಿ ನಾಪತ್ತೆಯಾಗಿದ್ದಾರೆ.

ಚಾರಣಿಗರ 12 ಮಂದಿ ತಂಡ ಶುಕ್ರವಾರ ಸುಬ್ರಹ್ಮಣ್ಯದ ದೇವರಗದ್ದೆ ಮಾರ್ಗವಾಗಿ ಕುಮಾರ ಪರ್ವತಕ್ಕೆ ಚಾರಣ ಆರಂಭಿಸಿತ್ತು. ಗಿರಿಗದ್ದೆಯಲ್ಲಿ ತಂಗಿದ್ದ ತಂಡ ಭಾನುವಾರ ಶೇಷ ಪರ್ವತ ತನಕ ಚಾರಣ ಮಾಡಿ ವಾಪಸ್ಸಾಗಿತ್ತು. ಸಂಜೆ 4.30 ರ ವೇಳೆಗೆ ಗಿರಿಗದ್ದೆ ಭಟ್ರ ಮನೆಯಲ್ಲಿ ಊಟ ಮಾಡಿ ತಂಡವು ವಾಪಸ್‌ ಊರಿಗೆ ಹೊರಟಿದ್ದರು.ತಂಡದಲ್ಲಿದ್ದ 5 ಮಂದಿ ಮೊದಲಿಗೆ ಹೊರಟು ಬಂದಿದ್ದು ನಂತರ ಸಂತೋಷ್ ಒಬ್ಬರೇ ಬಂದಿದ್ದ ಅವರ ಹಿಂದಿಂದ 6 ಮಂದಿ ಬರುತಿದ್ದರು. ಈ ನಡುವೆ ಮದ್ಯದಲ್ಲಿದ್ದ ವ್ಯಕ್ತಿ ಕೇವಲ 10 ನಿಮಿಷ ಅಂತರದಲ್ಲಿ ಕಾಣೆಯಾಗಿದ್ದಾರೆ.

ಚಾರಣ ತಂಡದಲ್ಲಿದ್ದವರು ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಉದ್ಯೋಗಿಗಳು. ರಾತ್ರಿಯೇ ವೈಲ್ಡ್ ಲೈಫ್‌ ಅಧಿಕಾರಿಗಳ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಲಾಗಿದೆ. ಆದರೆ ಸುಳಿವು ಸಿಕ್ಕಿಲ್ಲ.

ADVERTISEMENT

ತಂಡದಲ್ಲಿದ್ದವರು ಸೋಮವಾರ ಕುಕ್ಕೆಗೆ ಬಂದಿದ್ದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲು ಸಿದ್ದತೆ ನಡೆಸುತಿದ್ದಾರೆ.

ಇಲ್ಲಿ ಚಾರಣ ಮಾಡುವುದು ಈಗ ಸಮಯ ಸೂಕ್ತವಲ್ಲ. ಈ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ.ಇದರ ನಡುವೆಯೂ ಚಾರಣಿಗರು ಅರಣ್ಯ ಪ್ರವೇಶಿಸಿದ್ದು ಇದೀಗ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಕಾಣೆಯಾಗಿರುವುದನ್ನು ಯುವಕನ ಸ್ನೇಹಿತ ವಿನಯ್ ಸ್ಪಷ್ಟ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.