ADVERTISEMENT

ನ್ಯಾಯವಿಜ್ಞಾನ ಪದವೀಧರರ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:10 IST
Last Updated 4 ಮಾರ್ಚ್ 2021, 4:10 IST

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಪರಾಧ ಮತ್ತು ನ್ಯಾಯವಿಜ್ಞಾನ ಪದವೀಧರರ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅಪರಾಧಶಾಸ್ತ್ರ ಮತ್ತು ನ್ಯಾಯವಿಜ್ಞಾನ ವಿಭಾಗದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕರ ಒಕ್ಕೂಟ ಹಾಗೂ ಇಂಡಿಯನ್ ಫೊರೆನ್ಸಿಕ್ ವಿದ್ಯಾರ್ಥಿಗಳ ಸಂಘಟನೆ ಒತ್ತಾಯಿಸಿದೆ.

‘ಹೆಚ್ಚುತ್ತಿರುವ ಅಪರಾಧ ಪ್ರಕರಣ ವಿರುದ್ಧ ದೂರುಗಳು ದಾಖಲಾಗುತ್ತಿವೆ. ಆದರೆ, ವಿಚಾರಣೆ ಸೇರಿದಂತೆ ಎಲ್ಲ ಪ್ರಕ್ರಿಯೆ ಮುಗಿಯುವುದು ವಿಳಂಬವಾಗುತ್ತಿದ್ದು, ಆರೋಪಿಗಳಿಗೆ ಶಿಕ್ಷೆ ಒದಗಿಸುವುದಕ್ಕೂ ತಡವಾಗುತ್ತಿರುವುದರಿಂದ ಬಹುತೇಕರು ಬಿಡುಗಡೆಯಾಗುತ್ತಿದ್ದಾರೆ. ಇದು ತಪ್ಪಿ, ಅಪರಾಧ ನ್ಯಾಯವ್ಯವಸ್ಥೆ ಸುಧಾರಿಸಬೇಕೆಂದರೆ ಸಾಕ್ಷ್ಯ, ಅಪರಾಧ ಪತ್ತೆಗೆ ಅಪರಾಧ ಮತ್ತು ನ್ಯಾಯವಿಜ್ಞಾನ ಪದವೀಧರರನ್ನು ಬಳಸಿಕೊಳ್ಳಬೇಕಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಟರಾಜ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆ, ಕಾರಾಗೃಹ, ನ್ಯಾಯಾಂಗ, ಎಲ್ಲ ನ್ಯಾಯ ವಿಜ್ಞಾನ ಪ್ರಯೋಗಾಲಯ, ಸಾರಿಗೆ, ಸರ್ಕಾರಿ ಪತ್ತೆದಾರಿ ಮತ್ತು ಭದ್ರತಾ ಕ್ಷೇತ್ರ, ಬ್ಯಾಂಕು ಮತ್ತು ಹಣಕಾಸು ಸಂಸ್ಥೆ ಸೇರಿದಂತೆ ವಿವಿಧ 13 ಇಲಾಖೆಗಳಲ್ಲಿ ಈ ಹುದ್ದೆಗಳಿಗೆ ಅರ್ಹ ಪದವೀಧರರನ್ನು ನೇಮಿಸಿಕೊಳ್ಳಬೇಕು ಎಂದರು.

ADVERTISEMENT

ರಾಜ್ಯದಲ್ಲಿ ಧಾರವಾಡ, ದಾವಣಗೆರೆ, ಬೆಳಗಾವಿ, ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರ 9 ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಸುಮಾರು 40 ಶಿಕ್ಷಣ ಸಂಸ್ಥೆಗಳಿಂದ ಪ್ರತಿ ವರ್ಷ ಅಪರಾಧ ಮತ್ತು ನ್ಯಾಯವಿಜ್ಞಾನ ವಿಭಾಗದಿಂದ ನೂರಾರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಬರುತ್ತಿದ್ದಾರೆ. ಅವರಿಗೆ ಇರುವ ವಿಫುಲ ಅವಕಾಶಗಳಿದ್ದರೂ, ಅವುಗಳ ಸದ್ಬಳಕೆ ಆಗುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.