ADVERTISEMENT

ಸಚಿವ ಸಿಟಿ ರವಿಗೆ ತರಾಟೆ ತೆಗೆದುಕೊಂಡ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:39 IST
Last Updated 5 ನವೆಂಬರ್ 2019, 19:39 IST
   

ಹೊಸಪೇಟೆ: ‘ಸ್ವಚ್ಛ ಭಾರತ ಎನ್ನುತ್ತೀರಿ. ಹಂಪಿಯಲ್ಲಿ ಶೌಚಾಲಯಗಳನ್ನು ಕಟ್ಟಲು ಬಿಡುವುದಿಲ್ಲ. ಈ ವಿಷಯವನ್ನು ಎಲ್ಲರಿಗೂ ಹೇಳಿಯಾಗಿದೆ. ಈಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳುವುದೊಂದೆ ಬಾಕಿ ಇದೆ’ ಎಂದು ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರನ್ನು ತರಾಟೆಗೆ ತೆಗೆದುಕೊಂಡರು.

ರವಿ ಅವರು ಮಂಗಳವಾರ ಮಠಕ್ಕೆ ಭೇಟಿ ನೀಡಿದಾಗ ಸ್ವಾಮೀಜಿ, ‘ಗಂಡಸರು ಹೇಗೋ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ಹೆಣ್ಣು ಮಕ್ಕಳು ಶೌಚಾಲಯಕ್ಕೆ ಎಲ್ಲಿಗೆ ಹೋಗಬೇಕು? ಪುರಾತತ್ವ ಇಲಾಖೆಯ ಅಧಿಕಾರಿಗಳು ಎಲ್ಲದಕ್ಕೂ ಕಿರಿಕಿರಿ ಮಾಡುತ್ತಾರೆ. ಹಂಪಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಲಭ್ಯಗಳನ್ನೇ ಕೊಡುವುದಿಲ್ಲ ಎಂದರೆ ಏನರ್ಥ’ ಎಂದು ಪ್ರಶ್ನಿಸಿದರು.

ಗುತ್ತಿಗೆದಾರರಿಗೆ ನೋಟಿಸ್‌
‘ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರಗಳಿಗೆ ಬಣ್ಣ ಬಳಿದು ಎರಡು ವರ್ಷಗಳಾಗಿಲ್ಲ. ಆಗಲೇ ಬಣ್ಣ ಕಳೆದುಕೊಳ್ಳುತ್ತವೆ ಎಂದರೆ ಏನರ್ಥ? ಈ ವಿಷಯವನ್ನು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಓದಿರುವೆ. ಕಾಮಗಾರಿ ಕೈಗೆತ್ತಿಕೊಂಡವರಿಗೆ ಕೂಡಲೇ ನೋಟಿಸ್‌ ನೀಡಬೇಕು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್‌ ಪಿ. ಕಾಳಿಮುತ್ತು ಅವರನ್ನು ಸಚಿವ ಸಿ.ಟಿ. ರವಿ ತರಾಟೆಗೆ ತೆಗೆದುಕೊಂಡರು.

ADVERTISEMENT

ಸಂಜೆ ತಾಲ್ಲೂಕಿನ ಕಮಲಾಪುರದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ನೋಟಿಸ್‌ ಕೊಟ್ಟು ಅದೇ ಗುತ್ತಿಗೆದಾರರಿಂದಲೇ ಪುನಃ ಕೆಲಸ ಮಾಡಿಸಿ. ಒಂದು ವೇಳೆ ಮಾಡದಿದ್ದರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದೂ ನಿರ್ದೇಶಿಸಿದರು.

‘ಎರಡೇ ವರ್ಷದಲ್ಲಿ ಹೊಳಪು ಕಳೆದುಕೊಂಡ ಗೋಪುರಗಳು’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಸೋಮವಾರ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.