ಬೆಳಗಾವಿ: ‘ಕಲ್ಲು ತೂರಾಟ ನಡೆಸಲು ಬಂದವರನ್ನು, ಪೆಟ್ರೋಲ್ ಬಾಂಬ್ ಎಸೆಯಲು ಬಂದಿದ್ದವರನ್ನು ಎತ್ತಿ ಮುದ್ದಾಡಬೇಕಿತ್ತೇ?’ ಎಂದು ಪ್ರಶ್ನಿಸುವ ಮೂಲಕ ಸಚಿವ ಸಿ.ಟಿ. ರವಿ ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರನ್ನು ಸಮರ್ಥಿಸಿಕೊಂಡರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷದವರು ಪ್ರಚೋದನೆ ನೀಡುತ್ತಿದ್ದಾರೆ. ಇವರನ್ನು ಪ್ರಚೋದಿಸಿ, ಬೀದಿಗೆ ತಳ್ಳಿ ಮಜಾ ನೋಡುತ್ತಿದ್ದಾರೆ. ಬೀದಿಯಲ್ಲಿ ಕಲ್ಲು ತೂರಾಟ ನಡೆಸುವವರು ಅಮಾಯಕರಲ್ಲ’ ಎಂದು ಆರೋಪಿಸಿದರು.
‘ರಾಜ್ಯ ಹೊತ್ತಿ ಉರಿಯಲಿದೆ ಎಂದು ಪ್ರಚೋದನಾ ಹೇಳಿಕೆ ನೀಡಿದ ಶಾಸಕ ಯು.ಟಿ. ಖಾದರ್ ಸೇರಿದಂತೆ ಪ್ರಚೋದನೆ ನೀಡುವವರ ವಿರುದ್ಧ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದು ಒತ್ತಾಯಿಸಿದರು.
ಲಾಡೆನ್ ಹುಟ್ಟಲು ಸಾಧ್ಯವಿಲ್ಲ:ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸರ್ವಾಧಿಕಾರಿ ಹಿಟ್ಲರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆಯೇ ಎನ್ನುವುದನ್ನು ತಳ್ಳಿ ಹಾಕಿದ ಅವರು, ‘ನಮ್ಮ (ಹಿಂದೂ) ಧರ್ಮದಲ್ಲಿ ಹಿಟ್ಲರ್, ಮುಸಲೋನಿ, ಬಿನ್ ಲಾಡೆನ್ ಹುಟ್ಟಲು ಸಾಧ್ಯವಿಲ್ಲ. ಶಿವಾಜಿ ಮಹಾರಾಜರು ಹುಟ್ಟುತ್ತಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.