ADVERTISEMENT

ಅಖಂಡ ಭಾರತವಾದರೆ ಮಾತ್ರ ಪಾಕ್‌ ಮುಸ್ಲಿಮರಿಗೆ ಪೌರತ್ವ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:07 IST
Last Updated 19 ಡಿಸೆಂಬರ್ 2019, 10:07 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ಅಖಂಡ ಭಾರತವಾದರೆ ಮಾತ್ರ ಪಾಕಿಸ್ತಾನದ ಮುಸ್ಲಿಮರಿಗೂ ಪೌರತ್ವ ನೀಡಲು ಸಾಧ್ಯ. ಬದಲಿಗೆ ಈಗಿನ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ, ತಮ್ಮ ಸಂಬಂಧಿಗಳಿಗೂ ಪೌರತ್ವ ಬೇಕು ಎನ್ನುವವರು ಭಾರತವನ್ನು ಪಾಕಿಸ್ತಾನ ಮಾಡಲು ಪ್ರಯತ್ನಿಸಿದರೆ ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

‘ಭಾರತಕ್ಕೆ ಅಕ್ರಮವಾಗಿ ನುಸುಳಿ ಬರುವವರಿಗೆ, ಆಕ್ರಮಣಕಾರರಿಗೆ ಪೌರತ್ವ ನೀಡಲು ಸಾಧ್ಯವಿಲ್ಲ, ಅಲ್ಲಿ ನಿರಾಶ್ರಿತರಾದವರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ. ಜನಾದೇಶಕ್ಕೆ ತಕ್ಕಂತೆ ಕೇಂದ್ರ ಈ ನಿರ್ಧಾರ ಕೈಗೊಂಡಿದೆ. ಇದರ ವಿರುದ್ಧ ಬೆದರಿಕೆ ಹಾಕುವವರಿಗೆ ಬಗ್ಗುವ ಪ್ರಶ್ನೆಯೇ ಇಲ್ಲ, ನಾವು ಕಾಂಗ್ರೆಸ್‌ನವರ ಹೈಕಮಾಂಡ್ ಅಲ್ಲ’ಎಂದು ಅವರು ಬುಧವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಖಾದರ್‌ಗೆ ತಿರುಗೇಟು: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ರಾಜ್ಯ ಹೊತ್ತಿ ಉರಿಯಬಹುದು ಎಂಬ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರ ಹೇಳಿಕೆಯನ್ನು ಖಂಡಿಸಿದ ಅವರು, ‘ಇಂತಹ ಮನಸ್ಥಿತಿಯವರೇ ಗೋಧ್ರಾದಲ್ಲಿ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿದವರು, ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಜನ ರೊಚ್ಚಿಗೆದ್ದಾಗ ಯಾವ ಪರಿಣಾಮ ಎದುರಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಬಹುಸಂಖ್ಯಾತರ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾವಿಸುವ ಅಗತ್ಯ ಇಲ್ಲ, ನಾವೂ ಬೀದಿಗೆ ಇಳಿದರೆ ನಿಮ್ಮ ಗತಿ ಏನಾದೀತು ಎಂಬ ಯೋಚನೆ ಮಾಡಿ’ ಎಂದರು.

ADVERTISEMENT

‘ದೇಶದಲ್ಲಿನ ಮುಸ್ಲಿಮರ ಯಾವ ಹಕ್ಕನ್ನೂ ಕಿತ್ತುಕೊಂಡಿಲ್ಲ. ಭಾರತದ ಪೌರತ್ವವನ್ನು ಪಾಕಿಸ್ತಾನದಲ್ಲಿರುವ ಖಾದರ್‌ ನೆಂಟರಿಗೂ ಕೊಡಬೇಕೆಂದು ಹೇಳಿದರೆ ಅದು ಸಾಧ್ಯವಿಲ್ಲ. ಭಾರತವನ್ನು ‍ಪಾಕಿಸ್ತಾನ ಮಾಡಲು ಬಿಡುವುದಿಲ್ಲ, ಅಂತಹ ಭಾವನೆ ಇದ್ದವರನ್ನು ಪಾಕಿಸ್ತಾನಕ್ಕೇ ಕಳುಹಿಸಬೇಕಾಗುತ್ತದೆ’ ಎಂದರು.

ಸದನಕ್ಕೆ ಕಾಲಿಡಲು ಬಿಡುವುದಿಲ್ಲ: ರೇಣುಕಾಚಾರ್ಯ

‘ಶಾಸಕ ಯು.ಟಿ.ಖಾದರ್ ಈ ಹಿಂದೆ ಸಚಿವನಾಗಿದ್ದವ,ಅವನೊಬ್ಬ ಮೂರ್ಖ, ಬೆಂಕಿ ಹಚ್ಚುವ ಮಾತನಾಡುವ ನಿನ್ನ ಭಾಷೆಯಲ್ಲೇ ನಾವೂ ತಕ್ಕ ಉತ್ತರ ಕೊಡಬೇಕಾಗುತ್ತದೆ, ಸದನದೊಳಗೆ ಕಾಲಿಡಲು ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಏಕವಚನದಲ್ಲೇ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.