ಬೆಂಗಳೂರು: ದೇಶದ ಎಲ್ಲ ಭಾಷೆಗಳಿಗೆ ಹೊಸ ಕಸುವು ತಂದಿದ್ದ ದಲಿತ ಸಾಹಿತ್ಯವು ಇಂದು ಮುಖ್ಯಪ್ರಕಾರದಲ್ಲಿ ಸೇರಿಕೊಂಡಿದೆ. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳು ದಲಿತ ಸಾಹಿತ್ಯವನ್ನು ಪ್ರತ್ಯೇಕವಾಗಿ ನೋಡದೇ ಒಳಗುಮಾಡಿಕೊಂಡು ಬಹುದೊಡ್ಡ ಔದಾರ್ಯವನ್ನು ಮೆರೆದಿವೆ ಎಂದು ರಾಜ್ಯಸಭೆ ಸದಸ್ಯರೂ ಆಗಿರುವ ಕವಿ ಎಲ್. ಹನುಮಂತಯ್ಯ ಹೇಳಿದರು.
ನಗರದ ಸಂತ ಜೋಸೆಫರ ಕಾಲೇಜಿನ ಕನ್ನಡ ವಿಭಾಗವು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ‘ದಲಿತ ಮತ್ತು ಮಹಿಳಾ ಸಾಹಿತ್ಯ; ಹೊಸ ಸಾಧ್ಯತೆಗಳು’ ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಕನ್ನಡ ವಿಭಾಗದ ಮುಖ್ಯಸ್ಥರಾದ ಈರಯ್ಯ ಹಂಪಾಪುರ ಸಂಪಾದಿಸಿರುವ ‘ನುಡಿ ಬಿಂಬ’ ಮತ್ತು ಪ್ರಾಧ್ಯಾಪಕಎಸ್. ಬಿ. ಹನುಮಂತರಾಯಪ್ಪ ಸಂಪಾದಿಸಿರುವ ‘ಎಳೆ ಚಿಗುರು’ ಪುಸ್ತಕಗಳನ್ನು ಅವರು ಬಿಡುಗಡೆ ಮಾಡಿದರು.
ಕನ್ನಡದಲ್ಲಿ ದಲಿತ ಸಾಹಿತ್ಯವೆಂಬುದು ಇತ್ತೀಚಿನ ವರ್ಷಗಳಲ್ಲಿ ಹುಟ್ಟಿದ್ದಲ್ಲ; ಪಂಪ, ಬಸವಣ್ಣನವರ ಕಾಲದಿಂದಲೂ ಬಂಡಾಯದ ಬಹುದೊಡ್ಡ ಚಹರೆಗಳು ಇದ್ದು, ಅಂತಹ ಪರಂಪರೆ ಕನ್ನಡದ್ದಾಗಿದೆ. ವಚನ ಸಾಹಿತ್ಯದಲ್ಲಿ ದಲಿತರೂ ಸೇರಿದಂತೆ ತಳಸಮುದಾಯದ ವಚನಕಾರರು, ಮಹಿಳಾ ವಚನಕಾರರು ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಕುವೆಂಪು ಅವರು ಬಹುದೊಡ್ಡ ಬಂಡಾಯಕವಿ ಎಂದೂ ಹನುಮಂತಯ್ಯ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಫಾದರ್ ವಿಕ್ಟರ್ ಲೋಬೊ ಅವರು, ವಿದ್ಯಾರ್ಥಿಗಳ ಬರೆಹವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಹೊಸ ತಲೆಮಾರನ್ನು ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿಸುತ್ತಿರುವುದು ಶ್ಲಾಘನೀಯ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.