ಗದಗ: ಮಕ್ಕಳಿಲ್ಲದ ಇಟಲಿಯ ಮಾಟಿಯೊ ಬರ್ಬೇರಿ– ಓಂಗಾರೊ ದಂಪತಿ ಇಲ್ಲಿನ ಬೆಟಗೇರಿಯ ಸೇವಾಭಾರತಿ ಟ್ರಸ್ಟಿನ ‘ಅಮೂಲ್ಯ’ ಕೇಂದ್ರದಲ್ಲಿ ಪೋಷಣೆಗೊಂಡ ನಾಲ್ಕು ವರ್ಷದ ಅನಾಥ ಬಾಲಕನನ್ನು ಬುಧವಾರ ದತ್ತು ಸ್ವೀಕರಿಸಿತು.
ಬಾಲಕನನ್ನು ಹಸ್ತಾಂತರಿಸಿದ್ದಕ್ಕೆ ಧನ್ಯವಾದ ಅರ್ಪಿಸಿದಇಟಲಿ ದಂಪತಿ, ಆತನಿಗೆ ಉತ್ತಮ ಭವಿಷ್ಯ ನೀಡುವುದಾಗಿ ಭರವಸೆ ನೀಡಿದರು.
ಬುದ್ದಿಮಾಂದ್ಯನಾಗಿರುವ ಈ ಬಾಲಕನಿಗೆ ಒಂದು ವರ್ಷ ಇರುವಾಗಲೇ ಆತನ ಪೋಷಕರು ಕೊಪ್ಪಳದಲ್ಲಿ ಬಿಟ್ಟು ಹೋಗಿದ್ದರು. ರಕ್ಷಣೆ ಮಾಡಲಾಗಿದ್ದ ಬಾಲಕನಿಗೆ ಗವಿಸಿದ್ಧೇಶ್ವರ ಎಂದು ನಾಮಕರಣ ಮಾಡಲಾಗಿತ್ತು.
ಸಂಸ್ಥೆಯಲ್ಲಿ ಪೋಷಣೆ ಮಾಡಲಾಗುತ್ತಿರುವ ಅನಾಥ ಮಕ್ಕಳಲ್ಲಿ ಇದುವರೆಗೆ ಅಮೆರಿಕಾ, ಸ್ವೀಡನ್ ಮತ್ತು ಇಟಲಿಗೆ ಮೂವರು ಬಾಲಕರು ಸೇರಿದಂತೆ ಒಟ್ಟು 32 ಮಕ್ಕಳನ್ನು ದೇಶ, ವಿದೇಶದ ದಂಪತಿಗಳು ದತ್ತು ಸ್ವೀಕರಿಸಿದ್ದಾರೆ.
ಮಗುವನ್ನು ಹಸ್ತಾಂತರಿಸಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿರುವ ‘ಅಮೂಲ್ಯ’ ವಿಶೇಷ ದತ್ತು ಸ್ವೀಕಾರ ಕೇಂದ್ರದ ಅಭಿವೃದ್ಧಿಗೆ ಸರ್ಕಾರದಿಂದ ₹5 ಲಕ್ಷವನ್ನು ಎರಡು ದಿನಗಳಲ್ಲಿ ಮಂಜೂರು ಮಾಡಲಾಗುವುದು ಎಂದರು.
ಸೇವಾಭಾರತಿ ಟ್ರಸ್ಟ್ನ ಉತ್ತರ ಕರ್ನಾಟಕ ಪ್ರಾಂತದ ಕಾರ್ಯದರ್ಶಿ ಗೋವರ್ಧನರಾವ್, ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಗಂಗಣ್ಣ ಕೋಟಿ, ಸುಶೀಲಾ ಕೋಟಿ, ಅಂದಾನಪ್ಪ ಪಟ್ಟಣಶೆಟ್ಟಿ, ಕಾರ್ಯದರ್ಶಿ ಸುಭಾಸ ಬಬಲಾದಿ, ರಾಘವೇಂದ್ರ ಯಳವತ್ತಿ, ಮಂಜುನಾಥ ಚನ್ನಪ್ಪನವರ, ಭಾರತಿ ಶೆಟ್ಟರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.