ADVERTISEMENT

118 ಎಇಇಗಳು ಜಲ ಸಂಪನ್ಮೂಲದಲ್ಲೇ ಮುಂದುವರಿಯಲಿ

ಮುಖ್ಯಮಂತ್ರಿಗೆ ಪತ್ರ ಬರೆದ ಡಿಸಿಎಂ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 19:45 IST
Last Updated 18 ಜೂನ್ 2021, 19:45 IST

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸಿರುವ 118 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು (ಎಇಇ) ಅದೇ ಇಲಾಖೆಯಲ್ಲಿ ಮುಂದುವರಿಸುವಂತೆ ಕೋರಿ ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಲೋಕೋಪಯೋಗಿ, ಜಲ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ನಡುವೆ ಎಂಜಿನಿಯರ್‌ಗಳ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ನಡುವೆಯೇ ಯಾವುದೇ ಪೂರ್ವಭಾವಿ ಮಾಹಿತಿ ನೀಡದೆ 118 ಎಇಇಗಳ ಸೇವೆಯನ್ನು ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸಿ ಮೇ 27ರಂದು ಆದೇಶ ಹೊರಡಿಸಿರುವ ಜಲ ಸಂಪನ್ಮೂಲ ಇಲಾಖೆಯ ನಿಲುವನ್ನು ಗೋವಿಂದ ಕಾರಜೋಳ ಆಕ್ಷೇಪಿಸಿದ್ದಾರೆ.

’ಈಗಾಗಲೇ ಲೋಕೋಪಯೋಗಿ ಇಲಾಖೆಯಲ್ಲಿ ವೃಂದ ಬಲಕ್ಕಿಂತ ಹೆಚ್ಚಿನ ಎಂಜಿನಿಯರ್‌ಗಳು ಇದ್ದಾರೆ. ಯಾವುದೇ ಇಲಾಖೆಯನ್ನು ಆಯ್ಕೆಮಾಡಿಕೊಳ್ಳದ ಎಲ್ಲರೂ ಲೋಕೋಪಯೋಗಿ ಇಲಾಖೆಯಲ್ಲೇ ಮುಂದುವರಿದಿದ್ದಾರೆ. ಈ ಹಂತದಲ್ಲಿ 118 ಎಇಇಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಹುದ್ದೆಗಳು ಲಭ್ಯವಿಲ್ಲ. ಆದ್ದರಿಂದ ಅವರನ್ನು ಜಲ ಸಂಪನ್ಮೂಲ ಇಲಾಖೆಯ ಸೇವೆಯಲ್ಲೇ ಮುಂದುವರಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಮೂರೂ ಇಲಾಖೆಗಳ ವೃಂದ ಬಲಕ್ಕೆ ಅನುಗುಣವಾಗಿ ಅಧಿಕಾರಿಗಳನ್ನು ಹಂಚಿಕೆ ಮಾಡಬೇಕಿದೆ. ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಇವೆ. ಮೂರೂ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಭರ್ತಿಯಾಗಿರುವ ಹುದ್ದೆಗಳ ಸಮಗ್ರ ಮಾಹಿತಿ ಕಲೆಹಾಕಿದ ಬಳಿಕ ಅಧಿಕಾರಿಗಳ ಹಂಚಿಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ತಜ್ಞರ ಸಮಿತಿಯ ತೀರ್ಮಾನಕ್ಕೆ ವಿರುದ್ಧವಾಗಿ 118 ಎಇಇಗಳ ಸೇವೆಯನ್ನು ಹಿಂದಿರುಗಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.