ಬೆಳಗಾವಿ: ವಿಧವೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ ಹಾಗೂ ₹ 1 ಲಕ್ಷ ದಂಡ ವಿಧಿಸಿ ಇಲ್ಲಿನ 8ನೇ ಹೆಚ್ಚುವರಿ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಚಿಕ್ಕೋಡಿ ತಾಲ್ಲೂಕಿನ ಖಡಕಲಾಟದ ಶಿಂಗೆ ಗಲ್ಲಿಯ ರಮೇಶ ಅಲಿಯಾಸ್ ರಾಮ ಲಕ್ಷ್ಮಣ ಜಾಧವ (31) ಶಿಕ್ಷೆಗೆ ಗುರಿಯಾದಾತ.
‘ಅವಿವಾಹಿತನಾಗಿದ್ದ ಆತ, ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ದುರುದ್ದೇಶದಿಂದಅದೇ ಗ್ರಾಮದ ವಿಧವೆಯನ್ನು ಪರಿಚಯ ಮಾಡಿಕೊಂಡು, ಜನತಾ ಮನೆ ಕೊಡಿಸುವುದಾಗಿ ಆಸೆ ಹುಟ್ಟಿಸಿದ್ದ. 2016ರ ಅ. 10ರಂದು ರಾತ್ರಿ 9ರ ಸುಮಾರಿಗೆ ಜನತಾ ಮನೆ ಸಲುವಾಗಿ ಫೋಟೊ ತೆಗೆಸಬೇಕು ಎಂದು ಹೇಳಿ ಸ್ಟುಡಿಯೊ ಒಂದಕ್ಕೆ ಕರೆದುಕೊಂಡು ಹೋಗಿದ್ದ. ಬಳಿಕ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ ಸಹಿ ಮಾಡಬೇಕು ಎಂದು ಕರೆದೊಯ್ದು ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ವರಾಂಡದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಮನೆಯಲ್ಲಿ ವಿಷಯ ತಿಳಿಸುವುದಾಗಿ ಆಕೆ ಚೀರಾಡಿದ್ದಕ್ಕೆ ಕಲ್ಲಿನಿಂದ ತಲೆ ಹಾಗೂ ಮುಖವನ್ನು ಜಜ್ಜಿ ಸ್ಥಳದಲ್ಲಿಯೇ ಭೀಕರವಾಗಿ ಕೊಲೆ ಮಾಡಿದ್ದ’ ಎಂದು ಮಹಿಳೆಯ ಸೋದರ ಬಸಪ್ಪ ನಾವಲಗಿ ನಿಪ್ಪಾಣಿ ಠಾಣೆಗೆ ದೂರು ನೀಡಿದ್ದರು. ತನಿಖಾಧಿಕಾರಿ ಕಿಶೋರ್ ಭರಣಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಬಿ. ಸೂರ್ಯವಂಶಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕಿರಣ ಎಸ್. ಪಾಟೀಲ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.