ADVERTISEMENT

ಡೆಂಗಿ ತೀವ್ರ: ಮುನ್ನೆಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 19:46 IST
Last Updated 11 ಜೂನ್ 2019, 19:46 IST
   

ಬೆಂಗಳೂರು: ಮುಂಗಾರು ಪೂರ್ವ ದಲ್ಲಿಯೇ ನಗರದಲ್ಲಿ ಮಳೆ ಕಾಣಿಸಿ ಕೊಂಡಿದೆ. ಇದು, ವಾತಾ ವರಣವನ್ನು ತಂಪುಗೊಳಿಸುವುದರ ಜೊತೆಗೆ, ಹಾನಿಕಾರಕ ವೈರಸ್‌ಗಳ ಬೆಳವಣಿಗೆಗೂ ಕಾರಣವಾಗಿದೆ. ಇದರಿಂದ ಡೆಂಗಿ ಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆಯೂ ಅಧಿಕವಿದ್ದು, ಹೆಚ್ಚು ಸಂಕೀರ್ಣ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಸಾವಿನ ಪ್ರಮಾಣ ಕೂಡಾ ಅಧಿಕ ಎಂದು ತಜ್ಞ ವೈದ್ಯರು ಹೇಳುತ್ತಾರೆ.

‘ನಗರದಲ್ಲಿ ಡೆಂಗಿ ಹಾಗೂ ಚಿಕೂನ್‍ಗುನ್ಯಾ ಪ್ರಕರಣಗಳು ಅಧಿಕವಾಗುತ್ತಿವೆ. ಈ ಕಾಯಿಲೆಗಳಿಂದ ಬಳಲುತ್ತಿರುವ 25-30 ರೋಗಿಗಳನ್ನು ಪ್ರತಿವಾರ ನಮ್ಮ ಆಸ್ಪತ್ರೆಯಲ್ಲಿ ತಪಾಸಣೆ ಮಾಡುತ್ತಿದ್ದೇವೆ. ಈ ಸಂಖ್ಯೆ ಏರುತ್ತಲೇ ಇದೆ. ಹಿಂದಿನ ವರ್ಷಗಳ ಚಿತ್ರಣಕ್ಕಿಂತ ಭಿನ್ನವಾಗಿ, ರಕ್ತದ ಪ್ಲೇಟಿಲೆಟ್ ಸಂಖ್ಯೆಗಳಲ್ಲಿ ಗಣನೀಯ ಕುಸಿತವನ್ನು ನಾವು ಕಾಣುತ್ತಿದ್ದೇವೆ ಹಾಗೂ ಬಹಳಷ್ಟು ರೋಗಿಗಳಲ್ಲಿ ಲಿವರ್‌ನ ಉರಿಯೂತ ಕೂಡಾ ಕಂಡುಬಂದಿದೆ’ ಎಂದು ನಾರಾಯಣ ಹೆಲ್ತ್ ಸಿಟಿಯ ಆಂತರಿಕ ಔಷಧ ವಿಭಾಗದ ತಜ್ಞ ಸಲಹಾ ವೈದ್ಯ ಡಾ.ಮಹೇಶ್ ಕುಮಾರ್ ಹೇಳುತ್ತಾರೆ.

ADVERTISEMENT

‘ಶೀತ ಮತ್ತು ಫ್ಲೂ ಜ್ವರದ ಜತೆಗೆ ನಿರಂತರ ಮಳೆಯಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ. ಇದು ಡೆಂಗಿ ಹೆಚ್ಚಾಗಲು ಕಾರಣ’ ಎಂದು ಅವರು ವಿವರಿಸಿದರು.

ಆರೋಗ್ಯವಂತ ವ್ಯಕ್ತಿಯಲ್ಲಿ ಪ್ರತಿ ಎಂ.ಎಲ್‌ ರಕ್ತದಲ್ಲಿ 1.50 ಲಕ್ಷದಿಂದ 4.50 ಲಕ್ಷದವರೆಗೆ ಬಿಳಿ ರಕ್ತದ ಕಣಗಳು ಇರುತ್ತವೆ. ಆದರೆ, ಡೆಂಗಿಯಿಂದ ಬಳಲುವವರಲ್ಲಿ ಬಿಳಿ ರಕ್ತದ ಕಣಗಳ ಸಂಖ್ಯೆ ಲಕ್ಷಕ್ಕಿಂತ ಕೆಳಗೆ ಕುಸಿಯುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಡೆಂಗಿ ಲಕ್ಷಣಗಳು

* ನಿರಂತರವಾಗಿ ಜ್ವರ

* ತಲೆ, ಕೀಲು ಮತ್ತು ಮಾಂಸಖಂಡ ನೋವು

* ವಾಕರಿಕೆ ಹಾಗೂ ದೇಹದಲ್ಲಿ ಬೊಬ್ಬೆ

* ಬಿಳಿ ರಕ್ತಕಣಗಳ ಸಂಖ್ಯೆ ಕುಸಿತ

ಎಚ್ಚರಿಕೆ ಕ್ರಮಗಳು

* ತೆರೆದ ತೊಟ್ಟಿಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಣೆ ಮಾಡಬಾರದು

* 3–4 ದಿನಕ್ಕೆ ಒಮ್ಮೆಯಾದರೂ ತೊಟ್ಟಿಗಳನ್ನು ಶುಚಿಗೊಳಿಸಬೇಕು

* ಕಾಯಿಸಿ, ಆರಿಸಿದ ನೀರನ್ನೇ ಕುಡಿಯಬೇಕು

* ತಾಜಾ ಆಹಾರವನ್ನೇ ಸೇವಿಸಬೇಕು

* ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಲು ಮೈತುಂಬಾ ಬಟ್ಟೆ ಧರಿಸಬೇಕು.

* ಮಲಗುವಾಗ ಸೊಳ್ಳೆ ಪರದೆ ಬಳಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.