ಚಿತ್ರದುರ್ಗ: ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ (ಶಾಂತಿಸಾಗರ) ಹೂಳೆತ್ತುವ ಹಾಗೂ ಒತ್ತುವರಿ ತೆರವುಗೊಳಿಸುವ ಅಭಿಯಾನಕ್ಕೆ ಚಿತ್ರನಟ ಕಿಶೋರ್ ಹಾಗೂ ನಟಿ ರೂಪಾ ಅಯ್ಯರ್ ಕೈಜೋಡಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ನಡೆಸುವ ಸದ್ಧರ್ಮ ನ್ಯಾಯಪೀಠಕ್ಕೆ ಸೋಮವಾರ ಧಾವಿಸಿ ಅಭಿಯಾನದ ಸ್ವರೂಪದ ಕುರಿತು ಸ್ವಾಮೀಜಿಯ ಗಮನ ಸೆಳೆದರು.
'ಏಷ್ಯಾದ ಎರಡನೇ ಅತಿದೊಡ್ಡ ಕೆರೆಯಲ್ಲಿ ಹೂಳು ತುಂಬಿದೆ. ಕೆರೆಯನ್ನು ಒತ್ತುವರಿ ಮಾಡಿಕೊಂಡು ಮೂಲ ಸ್ವರೂಪಕ್ಕೆ ಧಕ್ಕೆಯುಂಟು ಮಾಡಲಾಗಿದೆ. ಕೆರೆ ಸಂರಕ್ಷಣೆ ಮಾಡುವ ತುರ್ತು ಅಗತ್ಯವಿದೆ' ಎಂದು ನಟ ಕಿಶೋರ್ ಸುದ್ದಿಗಾರರಿಗೆ ತಿಳಿಸಿದರು.
'ಇದೊಂದು ಒಳ್ಳೆ ಕಾರ್ಯ. ನೀರು ತೀರಾ ಅತ್ಯಗತ್ಯ. ಕೆರೆ ಸಂರಕ್ಷಣೆಗೆ ಖಡ್ಗ ಎಂಬ ಸಂಸ್ಥೆ ಮುಂದಾಗಿದೆ. ಯುವಕರ ತಂಡದೊಂದಿಗೆ ನಾವೂ ಇದ್ದೇವೆ' ಎಂದು ನಟಿ ರೂಪ ಅಯ್ಯರ್ ತಿಳಿಸಿದರು.
'ಕೆರೆ ಹೂಳು ತೆಗೆಯುವ ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಸಹಕಾರ ನೀಡುತ್ತೇವೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು. ಪಕ್ಷಾತೀತವಾಗಿ ಕೆಲಸ ಮಾಡಿ' ಎಂದು ಸ್ವಾಮೀಜಿ ಹರಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.