ADVERTISEMENT

ಧಾರವಾಡ ಕೃಷಿ ವಿ.ವಿ ಘಟಿಕೋತ್ಸವ: ರೈತನ ಮಗನ ಚಿನ್ನದ ‘ಫಸಲು’

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 20:00 IST
Last Updated 17 ಜೂನ್ 2019, 20:00 IST
ಸಿದ್ದು ಚಿಂದಿ ಅವರ ಪೋಷಕರು ಹಸಿರು ಶಾಲು ಹೊದಿಸಿ ಅಭಿನಂದಿಸಿದರು
ಸಿದ್ದು ಚಿಂದಿ ಅವರ ಪೋಷಕರು ಹಸಿರು ಶಾಲು ಹೊದಿಸಿ ಅಭಿನಂದಿಸಿದರು   

ಧಾರವಾಡ: ಮೂರು ಎಕರೆ ಜಮೀನು ಹೊಂದಿರುವ ಅವಿಭಕ್ತ ಕುಟುಂಬದ ಯುವಕ, ಹಾವೇರಿ ಜಿಲ್ಲೆಯ ಹಿರೇಕೆರೂರಿನ ಸಿದ್ದು ಚಿಂದಿ ಕೃಷಿ ಪದವಿಯಲ್ಲಿಅತಿ ಹೆಚ್ಚು ಅಂಕಗಳಿಸುವ (9.17 ಸಿಜಿಪಿಎ) ಮೂಲಕ ಚಿನ್ನದ ಹುಡುಗನಾಗಿ ಹೊರಹೊಮ್ಮಿದರು.

ಇಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ಸಿದ್ದು ಅವರಿಗೆ ಎರಡು ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಜಿಕೆವಿಕೆಯಲ್ಲಿ ಅನುವಂಶೀಯತೆ ಮತ್ತು ಸಸ್ಯತಳಿ ವಿಜ್ಞಾನ ಕುರಿತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಿದ್ದು ಅವರು ರೋಗನಿರೋಧಕ ಸಾಮರ್ಥ್ಯದ ತಳಿ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಇದಕ್ಕಾಗಿ ಕೃಷಿ ವಿಜ್ಞಾನಿ ಆಗುವ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ADVERTISEMENT

‘ಜನಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಜಮೀನು ಹೊಂದಿದವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಕಡಿಮೆ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆಯುವ ತಳಿಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ’ ಎಂದು ಸಿದ್ದು ವಿವರಿಸಿದರು.

ಮಗನ ಸಾಧನೆಯನ್ನು ಕಣ್ತುಂಬಿಕೊಂಡಿದ್ದ ಅವರ ತಂದೆ ಬಸವರಾಜ ಹಾಗೂ ತಾಯಿ ರತ್ನಾ ಚಿಂದಿ ಪ್ರತಿಕ್ರಿಯಿಸಿ,
‘ಬಾಲ್ಯದಿಂದಲೂ ಸಿದ್ದು ಬಹಳ ಪ್ರತಿಭಾವಂತ. ಪಿಯುಸಿ ವಿಜ್ಞಾನ ವಿಭಾಗದ ನಾಲ್ಕೂ ವಿಷಯಗಳಲ್ಲಿ 100 ಅಂಕ ಗಳಿಸಿದ್ದ. ಆಗ ವೈದ್ಯಕೀಯ ಕೋರ್ಸ್‌ಗೂ ಸೇರಲು ಅವಕಾಶ ಇತ್ತು. ಆದರೆ ಅದನ್ನು ಓದಿಸಲು ನಮ್ಮಿಂದ ಸಾಧ್ಯವಾಗದು ಎಂದು ಕೃಷಿ ವಿಷಯದಲ್ಲಿ ಪದವಿ ಮಾಡಲು ಹೇಳಿದೆವು. ಶೈಕ್ಷಣಿಕ ಸಾಲ ಪಡೆದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.