ADVERTISEMENT

ಡಯಾಲಿಸಿಸ್‌: ಖಾಸಗಿ ಸಂಸ್ಥೆ ಜತೆಗಿನ ಒಪ್ಪಂದ ರದ್ದು

​ಪ್ರಜಾವಾಣಿ ವಾರ್ತೆ
Published 19 ಮೇ 2021, 17:11 IST
Last Updated 19 ಮೇ 2021, 17:11 IST

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಬಿಆರ್‌ಎಸ್ ಏಜೆನ್ಸಿ ಜತೆಗಿನ ಒಪ್ಪಂದವನ್ನು ಆರೋಗ್ಯ ಇಲಾಖೆ ರದ್ದು ಮಾಡಿದೆ.

ಸರ್ಕಾರಿ ಆಸ್ಪತ್ರೆಗಳೇ ಇನ್ನುಮುಂದೆ ಡಯಾಲಿಸಿಸ್ ಘಟಕಗಳನ್ನು ನಿರ್ವಹಿಸಲಿವೆ. ಔಷಧ, ನೀರು, ವಿದ್ಯುತ್ ಸೇರಿದಂತೆ ಡಯಾಲಿಸಿಸ್‌ ಘಟಕಗಳಿಗೆ ಅಗತ್ಯವಿರುವ ಮೂಲಸೌಕರ್ಯವನ್ನು ಸಮರ್ಪಕವಾಗಿ ಒದಗಿಸದೆಯೇ ಬಿಆರ್‌ಎಸ್ ಏಜೆನ್ಸಿ ಸೇವೆ ಒದಗಿಸುತ್ತಿದೆ ಎಂಬ ದೂರು ಸಲ್ಲಿಕೆಯಾಗಿತ್ತು. ಕೋವಿಡ್ ಕಾಣಿಸಿಕೊಂಡ ಬಳಿಕ ಚಿತ್ರದುರ್ಗ, ವಿಜಯಪುರ, ಕಲಬುರ್ಗಿ, ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿನ ಘಟಕಗಳಲ್ಲಿ ಸೇವೆ ವ್ಯತ್ಯಯವಾಗಿತ್ತು. ಕೆಲವು ಘಟಕಗಳು ತಾತ್ಕಾಲಿಕವಾಗಿ ಸ್ಥಗಿತವಾಗಿದ್ದವು.

ರೋಗಿಗಳೇ ಡಯಾಲಿಸಿಸ್‌ಗೆ ಅಗತ್ಯವಿರುವ ಔಷಧಗಳನ್ನು ತರಬೇಕಾದ ಪರಿಸ್ಥಿತಿ ಕೆಲವೆಡೆ ನಿರ್ಮಾಣವಾಗಿತ್ತು. ಈ ಸಮಸ್ಯೆ ಪರಿಹರಿಸುವಂತೆ ರೋಗಿಗಳು ಇಲಾಖೆಗೆ ಆಗ್ರಹಿಸಿದ್ದರು.

ADVERTISEMENT

ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ. ಎಂ. ಸೆಲ್ವರಾಜನ್, ಡಯಾಲಿಸಿಸ್‌ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, ಏಜೆನ್ಸಿಯು ಗುಣಮಟ್ಟದ ಡಯಾಲಿಸಿಸ್ ಸೇವೆ ಒದಗಿಸುವಲ್ಲಿ ವಿಫಲವಾಗಿದೆ. ಹಾಗಾಗಿ, ನಿರ್ವಹಣೆಯನ್ನು ಏಜೆನ್ಸಿಯಿಂದ ಹಿಂಪಡೆಯಲಾಗಿದೆ. ಸದ್ಯಕ್ಕೆ ಆಯಾ ಆಸ್ಪತ್ರೆಗಳೇ ನಿರ್ವಹಣೆ ಮಾಡಬೇಕಿದೆ. ಅಗತ್ಯ ಅನುದಾನ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.