ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೂರು ವರ್ಷದ ಹಿಂದೆ ಪಾರ್ಶ್ವವಾಯುಗೆ ಒಳಗಾಗಿದ್ದ ರಘು ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದಿದ್ದರು. ‘ಅನಾರೋಗ್ಯದಿಂದ ಗುಣಮುಖರಾಗಿ ಇತ್ತೀಚೆಗೆ ಮನೆಗೆ ಮರಳಿದ್ದರು. ಆದರೆ ಉಸಿರಾಟದ ಸಮಸ್ಯೆ ಮತ್ತೆ ಕಾಣಿಸಿಕೊಂಡಿತು. ಶನಿವಾರ ಮುಂಜಾನೆ 4.45ರ ವೇಳೆಗೆ ಅವರು ಮೃತಪಟ್ಟರು’ ಎಂದು ರಘು ಅವರ ಮಗ, ನಟ ನವೀನ್ ತಿಳಿಸಿದರು.
ನಾಗಪೂಜಾ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ರಘು ಅವರು, ‘ಬೆಟ್ಟದ ಹುಲಿ’ ಚಿತ್ರದಲ್ಲಿಯೂ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.ವಿಷ್ಣುವರ್ಧನ್ ಹಾಗೂ ಶಂಕರ್ನಾಗ್ ಅಭಿನಯದ ‘ಬೆಂಕಿ ಬಿರುಗಾಳಿ’ ಇವರಿಗೆ ಮತ್ತಷ್ಟು ಖ್ಯಾತಿ ತಂದ ಸಿನಿಮಾವಾಗಿತ್ತು.
ಜೊತೆಗೆ ವಿಷ್ಣುವರ್ಧನ್ ಅವರು ಅಭಿನಯಿಸಿದ್ದ ‘ಕಲ್ಲುವೀಣೆ ನುಡಿಯಿತು’, ಶಂಕರ್ನಾಗ್ ಅಭಿನಯಿಸಿದ್ದ ‘ಆಕ್ರೋಶ’, ‘ಹಳ್ಳಿಯ ಸುರಾಸುರರು’ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದರು. ‘ನಾಗಕಾಳ ಭೈರವ’, ‘ವೀಣೆ’ ಹೀಗೆ ಹಲವು ಹಿಟ್ ಸಿನಿಮಾಗಳು ಅವರು ನಿರ್ದೇಶನದಲ್ಲಿ ಮೂಡಿಬಂದಿತ್ತು. ನಿರ್ದೇಶನದ ಜೊತೆಗೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಭಗವಾನ್ ಅವರ ಜೊತೆಗೂಡಿ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಟೆಕ್ನಾಲಜಿ’ಯನ್ನು ಆರಂಭಿಸುವಲ್ಲಿ ರಘು ಅವರ ಪಾತ್ರ ಮಹತ್ವದ್ದಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.