ಬೆಂಗಳೂರು: ತುರ್ತು ಸಂದರ್ಭಗಳನ್ನು ಎದುರಿಸಲು ತಂತ್ರಜ್ಞಾನ ಅಳವಡಿಸಿಕೊಂಡಿರುವುದು ಸೇರಿದಂತೆ ವಿಪತ್ತು ನಿರ್ವಹಣೆಯಲ್ಲಿ ಕೈಗೊಂಡ ಅತ್ಯುತ್ತಮ ಕ್ರಮಗಳಿಗಾಗಿ ಕರ್ನಾಟಕಕ್ಕೆ ‘ಡಬ್ಲ್ಯೂಸಿಡಿಎಂ–ಡಿಪಿಆರ್’ ಶ್ರೇಷ್ಠತಾ ಪ್ರಶಸ್ತಿ ಲಭಿಸಿದೆ.
ತೀರ್ಪುಗಾರರ ಸಮಿತಿಯು ರಾಜ್ಯಸರ್ಕಾರದ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಆಯ್ಕೆ ಮಾಡಿದೆ. ಮುನ್ನೆಚ್ಚರಿಕೆ ನೀಡುವ ಕೇಂದ್ರೀಕೃತ ವ್ಯವಸ್ಥೆಯನ್ನು (ಡಿಇಡಬ್ಲ್ಯೂಎಸ್) ರಾಜ್ಯ ದ 104 ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಲಾಗಿದೆ. ಇದರಿಂದ, ತ್ವರಿತ ಗತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬಹುದಾಗಿದೆ. ಇಂತಹ ತಂತ್ರಜ್ಞಾನ ಕ್ರಮಗಳನ್ನು ಗುರುತಿಸಿ ವಿಪತ್ತು ನಿರ್ವಹಣೆ ಕುರಿತಾದ ವಿಶ್ವ ಕಾಂಗ್ರೆಸ್ (ಡಬ್ಲ್ಯೂಸಿಡಿಎಂ) ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದೆಹಲಿಯಲ್ಲಿ ಬುಧವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ (ಕೆಎಸ್ಡಿಎಂಎ) ಆಯುಕ್ತ ಡಾ. ಮನೋಜ್ ರಾಜನ್ ಅವರು ಕಂದಾಯ ಇಲಾಖೆ ಪರವಾಗಿ ಈ ಅಂತರರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಅವರಿಂದ ಸ್ವೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.