ಬೆಂಗಳೂರು: ಬಗರ್ ಹುಕುಂ ಸಮಿತಿ ಭೂ ಮಂಜೂರು ಮಾಡಿದ ರೈತರಿಗೆ ಒಂದು ತಿಂಗಳೊಳಗೆ ಸಾಗುವಳಿ ಪತ್ರ ನೀಡಬೇಕು ಮತ್ತು ಪತ್ರವನ್ನು ಹಸ್ತಾಂತರಿಸಿದ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಅವರು, ‘ಆನೇಕಲ್ ತಾಲ್ಲೂಕಿನಲ್ಲಿ ಹಲವು ಅರ್ಹರಿಗೆ ಭೂಮಂಜೂರಾತಿ ಮಾಡಿದ್ದರೂ ಸಾಗುವಳಿ ಪತ್ರ ನೀಡದೇ ಇರುವುದು ನನ್ನ ಗಮನಕ್ಕೆ ಬಂದಿದೆ. ಇವರಲ್ಲಿ ಶೋಷಿತ ಸಮಾಜದವರೇ ಹೆಚ್ಚು. ಈಗಾಗಲೇ ಸ್ಥಳ ಪರಿಶೀಲನೆ ನಡೆಸಿರುವ ಪ್ರಕರಣಗಳಲ್ಲಿ ಎಲ್ಲರಿಗೂ ತಿಂಗಳೊಳಗೆ ಸಾಗುವಳಿ ಪತ್ರ ನೀಡಬೇಕು’ ಎಂದು ಸೂಚಿಸಿದರು.
ಆನೆಕಲ್ ತಾಲ್ಲೂಕಿನಲ್ಲಿ ಒಟ್ಟು 694 ಅರ್ಜಿಗಳು ಸಲ್ಲಿಕೆಯಾಗಿದ್ದು, ಕೇವಲ 24 ಪ್ರಕರಣಗಳಲ್ಲಿ ಸಾಗುವಳಿ ಪತ್ರ ನೀಡಲಾಗಿದೆ. ಸಮಿತಿ ಮಂಜೂರು ಮಾಡಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆದಿದ್ದು, ಶುಲ್ಕ ಪಾವತಿಯೂ ಆಗಿದೆ. ಈ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಸಚಿವರು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.