ಬೆಂಗಳೂರು: ‘ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿ ಮಗಳು ಆಸ್ತಿಯಲ್ಲಿ ಪಾಲು ಕೇಳುವಾಗ ಅಥವಾ ಆಸ್ತಿ ಪಾಲುದಾರಿಕೆ ಕೋರಿ ಕೋರ್ಟ್ನಲ್ಲಿ ದಾವೆ ಹೂಡಿದರೆ, ವರದಕ್ಷಿಣೆ ಸಮಯದಲ್ಲಿ ನೀಡಲಾದ ಆಸ್ತಿ ವಿವರಗಳನ್ನೂ ದಾವೆಯಲ್ಲಿ ಸೇರಿಸಬೇಕು’ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನ ಹೇಮಲತಾ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಹತ್ವದ ತೀರ್ಪು ನೀಡಿದ್ದು,‘ಮಗಳು ವರದಕ್ಷಿಣೆ ರೂಪದಲ್ಲಿ ಆಸ್ತಿ ಪಡೆದಿದ್ದರೆ ಅದನ್ನು ಸಹಾ ಆಸ್ತಿ ಪಾಲುದಾರಿಕೆ ದಾವೆ ಹೂಡುವಾಗ ನಮೂದಿಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.
‘ಆಸ್ತಿಯನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದೋ ಅಥವಾ ಸ್ವಂತವಾಗಿ ಖರೀದಿಸಿದ್ದೋ ಎಂಬುದನ್ನು ವಿಚಾರಣಾ ನ್ಯಾಯಾಲಯವೇ ನಿರ್ಧರಿಸಬೇಕು’ ಎಂದು ನ್ಯಾಯಪೀಠ ತಿಳಿಸಿದೆ.
‘ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಅರ್ಜಿದಾರರು ಆಸ್ತಿ ಪಡೆದಿದ್ದರೆ ಅದನ್ನು ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಒಟ್ಟು ಆಸ್ತಿಯಾಗಿ ಪರಿಗಣಿಸಬೇಕಾಗುತ್ತದೆ. ಅದರಂತೆ ಅರ್ಜಿದಾರರ ಆಸ್ತಿಯನ್ನು ಕೂಡ ಪಾಲು ದಾವೆಯಲ್ಲಿ ಪರಿಗಣಿಸಬೇಕಾಗುತ್ತದೆ. ಆದರೆ, ಆಸ್ತಿಯನ್ನು ಸ್ವಂತವಾಗಿ ಖರೀದಿಸಿದ್ದರೆ ಅದನ್ನು ಪಾಲು ದಾವೆಯಲ್ಲಿ ಪರಿಗಣಿಸುವ ಅಗತ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.