ಬೆಂಗಳೂರು: ಬಡ್ತಿ ಮೀಸಲಾತಿ ವ್ಯಾಜ್ಯ ಇನ್ನೂ ಸುಪ್ರೀಂ ಕೋರ್ಟ್ನಲ್ಲಿರುವುದರಿಂದ, ಈ ಮಧ್ಯೆ ನಿವೃತ್ತಿಯಾದ ನೌಕರರಿಗೆ ಹಿಂಬಡ್ತಿ ಹೊಂದುವ ಹುದ್ದೆಗೆ ಅರ್ಹವೇತನವನ್ನು ಕಾಲ್ಪನಿಕವಾಗಿ ಪರಿಗಣಿಸಿ ನಿವೃತ್ತಿ ವೇತನ, ಗಳಿಕೆ ರಜೆ ನಗದೀಕರಣ ಮತ್ತಿತರ ಪಿಂಚಣಿ ಸೌಲಭ್ಯಗಳನ್ನು ಇತ್ಯರ್ಥಪಡಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಆದೇಶ ಹೊರಡಿಸಿದೆ.
ಹಿಂಬಡ್ತಿ– ಮುಂಬಡ್ತಿ ಪ್ರಕರಣ ಹಲವು ತಿಂಗಳುಗಳಿಂದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ, ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆಗೊಂಡು ಕೆಲವರು ಹಿಂಬಡ್ತಿ, ಇನ್ನೂ ಕೆಲವರು ಮುಂಬಡ್ತಿ ಪಡೆದು ನಿವೃತ್ತಿಯಾಗಿದ್ದಾರೆ. ಅಂಥ ಸಿಬ್ಬಂದಿಗೆ ಪಿಂಚಣಿ ವಿತರಿಸುವ ಕುರಿತ ಗೊಂದಲ ಪರಿಹರಿಸಲು ಆದೇಶದಲ್ಲಿ ಸೂಚಿಸಿದೆ.
‘ಪಿಂಚಣಿ ಸೌಲಭ್ಯಗಳನ್ನು ನಿವೃತ್ತಿ ಹೊಂದಿದ ಮೂರು ತಿಂಗಳ ಒಳಗೆ ಇತ್ಯರ್ಥಪಡಿಸಬೇಕು. ವಿಳಂಬವಾದರೆ, ಮೂರು ತಿಂಗಳ ಅವಧಿ ಮುಗಿದ ದಿನದಿಂದ ಇತ್ಯರ್ಥಗೊಳಿಸುವ ತಿಂಗಳ ಕೊನೆಯ ದಿನದವರೆಗೆ ಶೇ 8ರ ಬಡ್ಡಿ ನೀಡಬೇಕಾಗುತ್ತದೆ. ಪಿಂಚಣಿ ಸಕಾಲದಲ್ಲಿ ಸಿಗದೆ ಹಲವು ನೌಕರರು ಸಂಕಷ್ಟದಲ್ಲಿದ್ದಾರೆ. ಈ ಎಲ್ಲ ಕಾರಣಗಳಿಗೆ ಪಿಂಚಣಿ ಸೌಲಭ್ಯ ಇತ್ಯರ್ಥಪಡಿಸಲು ಈ ಆದೇಶದಲ್ಲಿ ವಿವರಣೆ ನೀಡಲಾಗಿದೆ’ ಎಂದು ಡಿಪಿಎಆರ್ ಅಧಿಕಾರಿ ತಿಳಿಸಿದರು.
ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯ ಅನ್ವಯ ಮುಂಬಡ್ತಿ ಹೊಂದಿ ನಿವೃತ್ತರಾಗಿದ್ದರೆ ಮುಂಬಡ್ತಿ ಪಡೆಯುವುದಕ್ಕೆ ಮೊದಲಿನ ಹುದ್ದೆಯಲ್ಲಿ ಪಡೆಯುತ್ತಿದ್ದ ವೇತನವನ್ನು ಕಾಲ್ಪನಿಕವಾಗಿ ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.