ADVERTISEMENT

65 ತಾಲ್ಲೂಕು ಬರಪೀಡಿತ ಅಧಿಸೂಚನೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST
   

ಬೆಂಗಳೂರು: ‘ರಾಜ್ಯದಾದ್ಯಂತ 65 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

‘65 ತಾಲ್ಲೂಕುಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು. ಪ್ರತಿ ತಾಲ್ಲೂಕಿನಲ್ಲಿ ತಲಾ ಒಂದೊಂದು ಗೋಶಾಲೆ ಅಥವಾ ಜಾನುವಾರು ಶಿಬಿರ ಸ್ಥಾಪಿಸಬೇಕು. ಈ ಪ್ರಕ್ರಿಯೆ ಆರಂಭಿಸಲು ನ್ಯಾಯಾಲಯದ ಆದೇಶದ ಪ್ರತಿಗೂ ಕಾಯುವಂತಿಲ್ಲ’ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ADVERTISEMENT

‘ಪ್ರತಿ ಜಾನುವಾರುಗೆ 6 ಕೆ.ಜಿ ಒಣಮೇವು, 18 ಕೆ.ಜಿ ಹಸಿರು ಮೇವು ಹಾಗೂ 1ಕೆ.ಜಿ ಪಶು ಆಹಾರ ನೀಡಬೇಕು. ಬರಪೀಡಿತ ಪ್ರದೇಶಗಳ ಸಮಗ್ರ ನಿರ್ವಹಣೆಗೆ ಸಂಬಂಧಿಸಿದಂತೆ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನುಷ್ಠಾನದ ಕುರಿತು ನ್ಯಾಯಪೀಠಕ್ಕೆ ವಿವರ ಸಲ್ಲಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

‘ಬರ ನಿರ್ವಹಣೆ ಹಾಗೂ ಪರಿಹಾರ ಕಾಮಗಾರಿ ಕೈಗೊಳ್ಳುವ ದಿಸೆಯಲ್ಲಿ ವಿಪತ್ತು ಉಪಶಮನ ನಿಧಿ (ಎಸ್‌ಡಿಎಂಎ) ಸ್ಥಾಪನೆ ಆಗಿದೆಯೇ ಅಥವಾ ಇಲ್ಲವೇ, ಸ್ಥಾಪನೆ ಮಾಡಿದ್ದರೆ ಅದರಲ್ಲಿ ಎಷ್ಟು ಹಣ ಇದೆ, ಗೋಶಾಲೆ ಹಾಗೂ ಜಾನುವಾರು ಶಿಬಿರಗಳಲ್ಲಿ ಮೇವು, ಕುಡಿಯುವ ನೀರು ಹಾಗೂ ‍ಪಶು ವೈದ್ಯಕೀಯ ಸೌಲಭ್ಯ ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ 2015ರ ಏಪ್ರಿಲ್‌ 8ರಂದು ಹೊರಡಿಸಲಾದ ಮಾರ್ಗಸೂಚಿಗಳ ಪಾಲನೆ ಆಗುತ್ತಿದೆಯೇ’ ಎಂಬ ಬಗ್ಗೆಯೂ ವಿವರ ಸಲ್ಲಿಸುವಂತೆ ತಾಕೀತು ಮಾಡಿದೆ.

ಆರು ತಿಂಗಳ ಅವಧಿಗೆ ರಾಜ್ಯದ 156 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ರಾಜ್ಯ ಸರ್ಕಾರ 2018ರ ಡಿಸೆಂಬರ್‌ 29ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ 2019ರ ಜೂನ್‌ 30ಕ್ಕೆ ಕೊನೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.