ಶ್ರೀರಂಗಪಟ್ಟಣ: ‘ಶ್ರೀಲಂಕಾಕ್ಕೆ ಪದೇಪದೇ ಹೋಗಿರೋದು ನಾನಲ್ಲ, ಡ್ರಗ್ಸ್ ನಂಟಿರುವುದು ನನಗಲ್ಲ. ಹೀಗಾಗಿ, ಉತ್ತರ ಕೊಡಬೇಕಾಗಿರುವವರು ಕಾಂಗ್ರೆಸ್ ಪಕ್ಷದವರು’ ಎಂದು ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ರಾಗಿಣಿಯಿಂದ ಒತ್ತಡ ಇದೆಯೇ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ‘ತನಿಖೆ ಬಗ್ಗೆ ಒತ್ತಡ ಇದೆ ಎಂದು ಹೇಳಿಲ್ಲ. ನಮ್ಮ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಇದೇ ಮೊದಲ ಬಾರಿಗೆ, ಇಷ್ಟು ದೊಡ್ಡ ಮಟ್ಟದ ತನಿಖೆಯಾಗುತ್ತಿರುವುದು ಕೂಡ ಬಿಜೆಪಿ ಸರ್ಕಾರದಿಂದ’ ಎಂದು ಸಚಿವರು ಹೇಳಿದರು.
‘ಅವರದ್ದೇ ಪಕ್ಷದ ಶಾಸಕರೊಬ್ಬರ ಮಗ ಮಲ್ಯ ರಸ್ತೆಯಲ್ಲಿ ಡ್ರಗ್ಸ್ ತೆಗೆದುಕೊಂಡು ದಾಳಿ ಮಾಡಿದ್ದು ಅವರಿಗೆ ಗೊತ್ತಿಲ್ಲವೇ? ಆ ಪ್ರಕರಣವನ್ನು ತನಿಖೆ ಮಾಡದೇ ಮುಚ್ಚಿಹಾಕುವ ಕೆಲಸ ಮಾಡಿದ್ದು ಯಾರು? ಇಂತಹ ಹತ್ತಾರು ಪ್ರಕರಣಗಳನ್ನು ಮುಚ್ಚಿಹಾಕುವ ಕೆಲಸವನ್ನು ಹಿಂದಿನ ಸರ್ಕಾರ ಮಾಡಿತ್ತು. ಆದರೆ ನಮ್ಮ ಸರ್ಕಾರ ಯಾವುದನ್ನು ಮುಚ್ಚಿಹಾಕುವ ಕೆಲಸ ಮಾಡಿಲ್ಲ’ ಎಂದರು.
‘ಅವರ ಪಕ್ಷದ ಶಾಸಕರು ಏಕೆ ಶ್ರೀಲಂಕಾಕ್ಕೆ ಹೋಗಿದ್ದರು? ಅವರಿಗೆ ತಾಕತ್ತು ಇದ್ದರೆ ಅವರ ಪಾಸ್ ಪೋರ್ಟ್ ತೋರಿಸಲಿ. ಅತಿವೃಷ್ಟಿ ಮತ್ತು ಕೋವಿಡ್ ಸಂಕಷ್ಟದಲ್ಲಿದ್ದವರ ನಿಧಿ ಸಂಗ್ರಹಕ್ಕೆ ಹೋಗಿದ್ರಾ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.