ಬೆಂಗಳೂರು: ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಮನುಸ್ಮೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ‘ಮನುಸ್ಮೃತಿ ಓದಿದರೆ ಅದು ಎಷ್ಟು ಜೀವ ವಿರೋಧಿಯಾಗಿದೆ ಎಂಬುದು ಅರ್ಥವಾಗುತ್ತದೆ. ಆದರೆ, ಮನುವಾದಿಗಳು ಮನುಸ್ಮೃತಿಯೇ ಶ್ರೇಷ್ಠ ಎನ್ನುತ್ತಿದ್ದಾರೆ. ನ್ಯಾಯಾಂಗವೂ ಮನುವಾದಿಗಳ ಹಿಡಿತದಲ್ಲಿ ಸಿಲುಕಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ದೇಶವನ್ನು ಸಂಪೂರ್ಣ ಛಿದ್ರಗೊಳಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘1927ರಲ್ಲಿ ಕೆರೆಯ ನೀರು ಮುಟ್ಟುವ ಹೋರಾಟ ನಡೆಸಿದ ಅಂಬೇಡ್ಕರ್ ಅವರು, ಮುಂದುವರಿದ ಭಾಗವಾಗಿ 1927ರ ಡಿಸೆಂಬರ್ 27ರಂದು ಮನುಸ್ಮೃತಿ ಸುಟ್ಟು ಹಾಕಿದರು. ಆದರೂ, ಶೂದ್ರರು, ಅತಿ ಶೂದ್ರರ ಮನಸುಗಳಲ್ಲಿ ಮನುಸ್ಮೃತಿ ಸೇರಿಕೊಂಡಿದೆ. ಎಲ್ಲಿಯ ತನಕ ಮನುಸ್ಮೃತಿ ಈ ದೇಶದಲ್ಲಿ ಇರುತ್ತದೋ ಅಲ್ಲಿಯ ತನಕ ಬ್ರಾಹ್ಮಣವಾದಿಗಳ ಆಟ ಮುಂದುವರಿಯುತ್ತದೆ. ಅದರ ಭಾಗವಾಗಿಯೇ ಶೇ 3ರಷ್ಟು ಜನಸಂಖ್ಯೆ ಇರುವವರಿಗೆ ಶೇ 10ರಷ್ಟು ಮೀಸಲಾತಿ(ಇಡಬ್ಲ್ಯುಎಸ್) ದೊರಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಮನುಸ್ಮೃತಿ ಪ್ರವೇಶ ಮಾಡಿದೆ. ಅದು ಕೇವಲ ಪುಸ್ತಕದಲ್ಲಿ ಅಕ್ಷರವಾಗಿ ಉಳಿದಿಲ್ಲ. ದೇಶದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಬಲಗೊಳ್ಳಲು ಮನುಸ್ಮೃತಿಯೇ ಕಾರಣ. ಆರ್ಎಸ್ಎಸ್ ಸೋಲುವ ತನಕ ಮನುಸ್ಮೃತಿ ಸೋಲುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.