ADVERTISEMENT

ಶಿವಮೊಗ್ಗದಲ್ಲಿ ಭೂ ಕಂಪನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 19:46 IST
Last Updated 21 ಜನವರಿ 2021, 19:46 IST
ಭೂಕಂಪದ ತೀವ್ರತೆಗೆ ನಗರದ ಜ್ಯೂವೆಲ್‌ ರಾಕ್‌ ಹೋಟೆಲ್‌ನ ಗೋಡೆ, ಚಾವಣೆ ಬಿರುಕು ಬಿಟ್ಟಿರುವುದು
ಭೂಕಂಪದ ತೀವ್ರತೆಗೆ ನಗರದ ಜ್ಯೂವೆಲ್‌ ರಾಕ್‌ ಹೋಟೆಲ್‌ನ ಗೋಡೆ, ಚಾವಣೆ ಬಿರುಕು ಬಿಟ್ಟಿರುವುದು   

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಜನರು ಮನೆಗಳಿಂದ ಹೊರಬಂದು ತಂಡೋಪತಂಡವಾಗಿ ಬೀದಿಗಳಲ್ಲಿ ನಿಂತಿದ್ದರು.

ರಾತ್ರಿ 10ರ ನಂತರ ಘಟನೆ ನಡೆದಿದ್ದು, ಹಲವು ಮನೆಗಳ ಕಿಟಕಿ, ಬಾಗಿಲುಗಳು ಮುಚ್ಚಿಕೊಂಡಿವೆ. ಗಾಜುಗಳು ಒಡೆದಿವೆ. ಕೆಲವು ಕಡೆ ಸಣ್ಣದಾಗಿ ಗೋಡೆಗಳು ಬಿರುಕು ಬಿಟ್ಟಿವೆ. ಪಾತ್ರೆಗಳು ಅಲ್ಲಾಡಿವೆ.

ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಹೆಚ್ಚಿನ ಶಬ್ದ ಕೇಳಿಬಂದಿದೆ. ಹಲವು ಕಟ್ಟಡಗಳು ಅಲ್ಲಾಡಿವೆ. ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಹೊಸನಗರದ ಹಲವು ಗ್ರಾಮಗಳಲ್ಲೂ ಜನರಿಗೆ ಭೂಕಂಪನದ ಅನುಭವವಾಗಿದೆ. ಹಳ್ಳಿಗಳಲ್ಲೂ ಜನರು ಭಯಭೀತರಾಗಿ ಹೊರಬಂದು ಶಬ್ದ ಬಂದ ದಿಕ್ಕಿನತ್ತ ಸಾಗಿದ್ದಾರೆ. ಎದುರಿಗೆ ಸಿಕ್ಕವರಿಗೆ ಈ ಬಗ್ಗೆ ವಿಚಾರಿಸಿದ್ದಾರೆ.

ADVERTISEMENT

ಶಿವಮೊಗ್ಗದ ಜ್ಯೂವೆಲ್‌ ರಾಕ್‌ ಹೋಟೆಲ್‌ನ ಚಾವಣಿ ಕುಸಿದಿದೆ. ಹೊಳೆಹೊನ್ನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಭಾರಿ ಶಬ್ದಕ್ಕೆ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಆನಂದಪುರ ಸುತ್ತಮುತ್ತ ಬಾಗಿಲು ಬಡಿತದ ಶಬ್ದವಾಗಿದೆ.

ರಿಪ್ಪನ್‌ಪೇಟೆಯಲ್ಲೂ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದೆ. ಕೆಲವೆಡೆ ಮನೆಯ ಪಾತ್ರೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮನೆಯಲ್ಲಿ ಇದ್ದವರು ಗಾಬರಿಯಿಂದ ಹೊರಗೆ ಓಡಿಬಂದಿದ್ದಾರೆ. ಹೋಬಳಿಯ ಅರಸಾಳು, ಕೆರೆಹಳ್ಳಿ, ಸೂಡೂರುಗೇಟ್, ಜೇನಿ, ಹೆದ್ದಾರಿಪುರ, ಬೆಳ್ಳೂರು, ಆಯನೂರು, ಹಾರನಹಳ್ಳಿಯಲ್ಲೂ ಭೂಕಂಪನದ ಅನುಭವವಾಗಿದೆ.

ಭೂಕಂಪನದ ತೀವ್ರತೆಗೆ ಕುಂಸಿ ಸಮೀಪದ ಚೋರಡಿಯ ಮುಖ್ಯರಸ್ತೆ ಬಿರುಕು ಬಿಟ್ಟಿದೆ.

ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆ: ಭೂಮಿ ಕಂಪಿಸಿದಾಗ ರಸ್ತೆಯ ಮೇಲಿದ್ದ ಕಾರುಗಳು, ಜನರು ಒಮ್ಮೆ ಅಲ್ಲಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.