ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ಜಾರಿ ಮಾಡಿದೆ.
ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್ ಹಾಗೂ ಅವರ ಆಪ್ತರಾದ ಸಚಿನ್ ನಾರಾಯಣ್, ರಾಜೇಂದ್ರ, ಆಂಜನೇಯ ಮತ್ತು ಸುನಿಲ್ ಕುಮಾರ್ ಶರ್ಮಾಗೆ ಸೂಚಿಸಲಾಗಿದೆ. ಸಮನ್ಸ್ ಜಾರಿ ಆಗಿರುವುದಾಗಿ ಗೊತ್ತಾಗಿದೆ. ವಿವರಗಳು ಗೊತ್ತಿಲ್ಲ. ಎಂದು ಶಿವಕುಮಾರ್ ತಿಳಿಸಿದರು.
ಶಿವಕುಮಾರ್ ಮತ್ತು ಅವರ ವ್ಯವಹಾರ ಪಾಲುದಾರರಾದ ಸಚಿನ್ ನಾರಾಯಣ್, ಶರ್ಮಾ ಟ್ರಾನ್ಸ್ಪೋರ್ಟ್ನ ಸುನಿಲ್ ಕುಮಾರ್ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಅಲ್ಲಿನ ಸುಖದೇವ್ ವಿಹಾರದ ನಿವಾಸಿ ರಾಜೇಂದ್ರ ಅವರ ವಿರುದ್ಧವೂ ಇಸಿಐಆರ್ (ಜಾರಿ ಪ್ರಕರಣ ಮಾಹಿತಿ ವರದಿ)ಪ್ರಕರಣ ದಾಖಲಾಗಿದೆ.
ಇವೇ ಆರೋಪಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಲ್ಲಿನ ವಿಶೇಷ ಆರ್ಥಿಕ ವಿಚಾರಣಾ ನ್ಯಾಯಾಲಯದಲ್ಲಿ ಈಗಾಗಲೇ 33 ಪುಟಗಳ ಹೇಳಿಕೆ ಸಲ್ಲಿಸಿದೆ. ದೆಹಲಿ ಆರ್.ಕೆ.ಪುರಂನ ಮನೆ, ಸಫ್ದರ್ಜಂಗ್ ಎನ್ಕ್ಲೇವ್ ಫ್ಲ್ಯಾಟ್ಗಳಿಂದ ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 8.60 ಕೋಟಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
‘ಸುನೀಲ್ ಕುಮಾರ್ ಶರ್ಮಾ. ಅವರಿಗೆ ಸೇರಿದ ಫ್ಲ್ಯಾಟ್ನಿಂದ ವಶಪಡಿಸಿಕೊಂಡ ₹6.68 ಕೋಟಿಯನ್ನು ಬೆಂಗಳೂರಿನಿಂದ ಹವಾಲಾ ಮಾರ್ಗದಲ್ಲಿ ಕಳಿಸಲಾಗಿದೆ. ‘ಐ.ಟಿ ದಾಳಿ ವೇಳೆ ಸಿಕ್ಕಿರುವ ಡೈರಿಯಲ್ಲಿ, ಹಣಕ್ಕೆ ಕೆ.ಜಿ ಎಂಬ ಸಂಕೇತಾಕ್ಷರ ಬಳಸಲಾಗಿದೆ’ ಎನ್ನಲಾಗಿದೆ.ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಶಿವಕುಮಾರ್, ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಕರೆತಂದು ಬಿಡದಿ ಬಳಿ ಈಗಲ್ಟನ್ ರೆಸಾರ್ಟ್ನಲ್ಲಿ ಇಟ್ಟಿದ್ದರು. ಅದೇ ಸಂದರ್ಭದಲ್ಲಿ ಐ.ಟಿ ಅಧಿಕಾರಿಗಳು ರೆಸಾರ್ಟ್, ಸಚಿವರ ಸದಾಶಿವ ನಗರ ಮನೆ ಮೇಲೂ ದಾಳಿ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.