ADVERTISEMENT

ದೇಶದಲ್ಲಿ ಕ್ರಮೇಣ ಏಕರೂಪದ ಪಠ್ಯಕ್ರಮ ಜಾರಿ: ಶಿಕ್ಷಣ ತಜ್ಞ ಗುರುರಾಜ ಕರಜಗಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 18:28 IST
Last Updated 5 ಅಕ್ಟೋಬರ್ 2021, 18:28 IST
ವಿಚಾರ ಸಂಕಿರಣದಲ್ಲಿ ಗುರುರಾಜ ಕರಜಗಿ ಮಾತನಾಡಿದರು- ಪ್ರಜಾವಾಣಿ ಚಿತ್ರ  
ವಿಚಾರ ಸಂಕಿರಣದಲ್ಲಿ ಗುರುರಾಜ ಕರಜಗಿ ಮಾತನಾಡಿದರು- ಪ್ರಜಾವಾಣಿ ಚಿತ್ರ     

ಬೆಂಗಳೂರು: ‘ಭಾರತದಲ್ಲಿ ಕಾಲ ಕ್ರಮೇಣ ಏಕರೂಪದ ಪಠ್ಯಕ್ರಮ ಜಾರಿಗೊಳ್ಳುವ ಸಾಧ್ಯತೆ ಇದೆ. ಹಂತ ಹಂತವಾಗಿ ಶಿಕ್ಷಣ ಮಂಡಳಿಗಳು ವಿಲೀನಗೊಳ್ಳಲಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಮೂಲಕ ಅದಕ್ಕೆ ವೇದಿಕೆ ಸಜ್ಜುಗೊಳಿಸುತ್ತಿರುವಂತೆ ಭಾಸವಾಗುತ್ತಿದೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ತಿಳಿಸಿದರು.

ಎಡ್‌ಕ್ವಾರ್ಟ್‌ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ: ಪಠ್ಯಕ್ರಮ ಮತ್ತು ಗುಣಮಟ್ಟದಲ್ಲಿ ಅವಕಾಶಗಳ ಆಗರ’ ಕುರಿತ ವಿಚಾರ ಸಂಕಿರಣದಲ್ಲಿ ಮಂಗಳವಾರ ಮಾತನಾಡಿದರು.

‘ಎನ್‌ಇಪಿಯ ಮೊದಲ ಭಾಗದಲ್ಲಿ ಇಸಿಸಿಇ ಉಲ್ಲೇಖವಿದೆ. ಇಂಗ್ಲೆಂಡ್‌ನಲ್ಲಿರುವಇಸಿಸಿ ಪದ್ಧತಿಯ ಬಹುಪಾಲು ಅಂಶಗಳು ಇಸಿಸಿಇಯಲ್ಲಿವೆ. ಇದರ ಅನ್ವಯ ಪೂರ್ವ ಪ್ರಾಥಮಿಕ ಹಂತವನ್ನೂ ಶಾಲಾ ಶಿಕ್ಷಣಕ್ಕೆ ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಇಂಗ್ಲೆಂಡ್‌ನಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆ ದೇಶದಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಅನುಮತಿ ಪಡೆಯಲು ಹರಸಾಹಸ ಮಾಡಬೇಕು. ನಮ್ಮಲ್ಲಿ ಅದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ’ ಎಂದರು.

ADVERTISEMENT

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ‘ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ 1ನೇ ತರಗತಿಯಿಂದಲೇ ಶಾಲೆಗಳನ್ನು ಆರಂಭಿಸಲಾಗಿದೆ. ಮಾಧ್ಯಮಗಳು ತನ್ನ ಮೇಲೆ ಮುಗಿಬೀಳಬಹುದು ಎಂಬ ಕಾರಣಕ್ಕೆ ಸರ್ಕಾರ ಇದನ್ನು ಇನ್ನೂ ಅಧಿಕೃತಗೊಳಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.