ADVERTISEMENT

ನೆರೆ ಪರಿಹಾರಕ್ಕೆ ನೀತಿ ಸಂಹಿತೆ ಅಡ್ಡಿ ಇಲ್ಲ: ಸಂಜೀವ್‌ ಕುಮಾರ್

15 ವಿಧಾನಸಭೆಗಳಿಗೆ ಉಪಚುನಾವಣೆ–ಅ.21ಕ್ಕೆ ಮತದಾನ, 24ಕ್ಕೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 19:50 IST
Last Updated 21 ಸೆಪ್ಟೆಂಬರ್ 2019, 19:50 IST
ಸಂಜೀವ್ ಕುಮಾರ್ಪ್ರ
ಸಂಜೀವ್ ಕುಮಾರ್ಪ್ರ   

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವುದರಿಂದ ಶನಿವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ ನೆರೆ ಪರಿಹಾರ ಕಾರ್ಯಗಳಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

‘ನೆರೆ ಪರಿಹಾರ ಕಾರ್ಯಗಳನ್ನು ಮಾಡಬಹುದು. ಆದರೆ ಹೊಸ ಯೋಜನೆಗಳ ಉದ್ಘಾಟನೆಯಂತಹ ಕಾರ್ಯಕ್ರಮಗಳಿಂದ ರಾಜಕಾರಣಿಗಳು ದೂರ ಇರಬೇಕು. ದಸರಾ ಉತ್ಸವಗಳಿಗೆ ವಿಶೇಷ ಅನುಮತಿ ಪಡೆದು ಕಾರ್ಯಕ್ರಮಗಳನ್ನು ನಡೆಸಬಹುದು. ಇಲ್ಲೂಸಹ ರಾಜಕಾರಣಿಗಳು ಕೆಲವೊಂದು ನಿರ್ಬಂಧಗಳನ್ನು ಪಾಲಿಸಬೇಕಾಗುತ್ತದೆ’ ಎಂದು ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನೀತಿ ಸಂಹಿತೆ ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಗಷ್ಟೇ ಅನ್ವಯವಾಗುತ್ತದೆ. ಮತದಾರರನ್ನು ಓಲೈಸುವಂತಹ ಯಾವುದೇ ಕಾರ್ಯಗಳನ್ನು ನಡೆಸುವಂತಿಲ್ಲ. ಅಕ್ಟೋಬರ್‌ 21ರಂದು ಮತದಾನ, 24ರಂದು ಮತ ಎಣಿಕೆ ನಡೆಯಲಿದೆ. ಅಲ್ಲಿಯವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ’ ಎಂದರು.

ADVERTISEMENT

2019ರ ಜನವರಿ 1ಕ್ಕೆ ಅನ್ವಯವಾಗುವಂತೆ ಹೊಸ ಮತದಾರರು ಇದೇ 23ರೊಳಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಂಡರೆ ಮತದಾನದ ಅವಕಾಶ ಪಡೆಯಲಿದ್ದಾರೆ ಎಂದು ತಿಳಿಸಿದರು.

37.49 ಲಕ್ಷ ಮತದಾರರು: 15 ಕ್ಷೇತ್ರಗಳಲ್ಲಿ 19.12 ಲಕ್ಷ ಪುರುಷರು ಮತ್ತು 18.36 ಲಕ್ಷ ಮಹಿಳೆಯರ ಸಹಿತ ಒಟ್ಟು 37.49 ಲಕ್ಷ ಮತದಾರರಿದ್ದಾರೆ. ಇವರಲ್ಲಿ 70,619 ಮಂದಿ 18 ವರ್ಷದ ಮತದಾರರು. 22,598 ಚುನಾವಣಾ ಸಿಬ್ಬಂದಿ ಸಹಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.