ಕಾರವಾರ: ಜೊಯಿಡಾ ತಾಲ್ಲೂಕಿನ ಪಣಸೋಲಿ ಅರಣ್ಯ ವಲಯದಲ್ಲಿ ಕಾಡಾನೆಗಳ ದಾಳಿಗೀಡಾಗಿ, ಅರಣ್ಯ ಇಲಾಖೆ ಸಿಬ್ಬಂದಿ ಸಾಕಿದ್ದ ರಾಜೇಶ್ ಹೆಸರಿನ 57 ವರ್ಷದ ಆನೆಯು ಬುಧವಾರ ಮೃತಪಟ್ಟಿದೆ.
'ಇಲಾಖೆ ಕಚೇರಿಯಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಕಾಡಿನಲ್ಲಿ ಬೆಳಿಗ್ಗೆ ಆನೆಯನ್ನು ಮೇಯಲು ಬಿಟ್ಟಿದ್ದೆವು. ಈ ವೇಳೆ ಐವರು ಮಾವುತರೂ ಇದ್ದರು. ಆದರೆ, ಏಕಾಏಕಿ ಬಂದ ಎರಡು ಆನೆಗಳು ಸಾಕಾನೆ ಮೇಲೆ ದಾಳಿ ಮಾಡಿದವು. ಕಾಡಾನೆಗಳನ್ನು ಬೆದರಿಸಲು ಮಾವುತರು ಪಟಾಕಿ ಮತ್ತು ಸಿಡಿಮದ್ದು ಸಿಡಿಸಿದರೂ ಆನೆಗಳ ದಾಳಿ ನಿಲ್ಲಲಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ಕೆ.ಜಿ. ರಾಥೋಡ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
'ಗಂಭೀರವಾಗಿ ಗಾಯಗೊಂಡಿದ್ದ ಆನೆಗೆ, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದ ಪಶುವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ಮೃತಪಟ್ಟಿತು' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.