ADVERTISEMENT

ಇನ್ನು ಕನ್ನಡದಲ್ಲೂ ಬಿ.ಇ. ಬೋಧನೆ

ಎಂಜಿನಿಯರಿಂಗ್ ಕಾಲೇಜುಗಳಲ್ಲಿ 4 ವರ್ಷಗಳ ಬಿ.ಎಸ್ಸಿ (ಆನರ್ಸ್) ಪದವಿಗೆ ಸಿಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 20:43 IST
Last Updated 12 ಅಕ್ಟೋಬರ್ 2021, 20:43 IST
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ.‌ ಆನರ್ಸ್ ಮತ್ತು ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಟಿಯು ಕುಲಸಚಿವ ಪ್ರೊ. ಕರಿಸಿದ್ದಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌ , ಮುಖ್ಯಮಂತ್ರಿ ಕಾರ್ಯದರ್ಶಿ ಜಗದೀಶ್ ಇದ್ದರು  ಪ್ರಜಾವಾಣಿ ಚಿತ್ರ
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ.‌ ಆನರ್ಸ್ ಮತ್ತು ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಟಿಯು ಕುಲಸಚಿವ ಪ್ರೊ. ಕರಿಸಿದ್ದಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌ , ಮುಖ್ಯಮಂತ್ರಿ ಕಾರ್ಯದರ್ಶಿ ಜಗದೀಶ್ ಇದ್ದರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇಡೀ ಶಿಕ್ಷಣ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಬೇಕಾಗಿದ್ದು, ಈ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಯಪಿ) ಜಾರಿಗೆ ತರಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಎನ್ಇಪಿ ಜಾರಿಗೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಅವರು ಬಿ.ಇ ಕಲಿಕೆಗೆ ರಾಜ್ಯವನ್ನು ಅತ್ಯುತ್ತಮ ತಾಣವನ್ನಾಗಿ ಬೆಳೆಸುವ ಉದ್ದೇಶದ ‘ಡೆಸ್ಟಿನೇಶನ್ ಕರ್ನಾಟಕ’, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಪದವಿ ಮತ್ತು ಕನ್ನಡ ಮಾಧ್ಯಮದಲ್ಲೂ ಬಿ.ಇ ಬೋಧನೆಗೆ ಹಸಿರು ನಿಶಾನೆ ತೋರಿಸಲಾಯಿತು.

ADVERTISEMENT

‘ಶಿಕ್ಷಣ ವ್ಯವಸ್ಥೆಯನ್ನು ದಿಢೀರನೆ ಬದಲಿಸಲು ಸಾಧ್ಯವಿಲ್ಲ. ಹಲವು ವರ್ಷಗಳ ಕಾಲದ ಸಂಶೋಧನೆ, ವಿಶ್ಲೇಷಣೆ, ಅಳವಡಿಸಿಕೊಳ್ಳಲು ಇರುವ ಸಾಧ್ಯತೆಗಳು ಎಲ್ಲವನ್ನೂ ಗಂಭೀರವಾಗಿ ನಡೆಸಿಎನ್ಇಪಿ ಜಾರಿಗೆ ತರಲಾಗುತ್ತಿದೆ‘ ಎಂದು ವಿವರಿಸಿದರು.

‘ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಅಧ್ಯಯನದವರೆಗೂ ಬದಲಾವಣೆ ಆಗಬೇಕಿದೆ. ಇದು ಸಾಧ್ಯವಾಗಬೇಕೆಂದರೆ, ಮೊದಲು ಶಿಕ್ಷಕರ ಮನಸ್ಥಿತಿ ಬದಲಾಗಬೇಕು. ಎನ್ಇಪಿ ಯಶಸ್ಸು ಕಾಣಬೇಕೆಂದರೆ ಇದು ಅತ್ಯಂತ ಮುಖ್ಯ’ ಎಂದರು.

‘ಶಿಕ್ಷಣ ಕ್ರಮದಲ್ಲಿ ಈವರೆಗೂ ಕೇವಲ ಶೇಕಡಾವಾರು ಅಂಕ ಗಳಿಕೆಗೆ ಗಮನ ಕೊಡಲಾಗುತ್ತಿತ್ತು. ಆದರೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಯ ಪರ್ಸೆಂಟೇಜ್ ಪದ್ಧತಿ ಹೋಗಿ ‘ಪರ್ಸೆಂಟೈಲ್’ ವಿಧಾನ ಜಾರಿಗೆ ಬಂದಿದೆ. ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳು ಇದನ್ನು ಗಮನಿಸಿ, ಅಳವಡಿಸಿಕೊಳ್ಳಬೇಕು‘ ಎಂದರು.

ಪ್ರಧಾನಿಯವರ ದೂರದೃಷ್ಟಿಯನ್ನು ಕೊಂಡಾಡಿದ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್‌ಇಪಿ ಗೀತೆ: ಕಾರ್ಯಕ್ರಮದಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ ಗೀತೆ’ಯಾದ 'ಜಯವಾಗಲಿ ಶಿಕ್ಷಣಕೆ’ಯನ್ನು ಕೂಡ ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಧಾರವಾಡದ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ.ಎಸ್.ಎಂ. ಶಿವಪ್ರಸಾದ್ ರಚಿಸಿರುವ ಈ ಗೀತೆಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಎನ್ಇಪಿ ಆಶಯಗಳನ್ನು ಸಾರುವ ಈ ಗೀತೆಯನ್ನು ಹೊಂಬಾಳೆ ಫಿಲಂಸ್ ಸಂಸ್ಥೆಯ ಮಾಲೀಕ‌ ವಿಜಯ್ ಕಿರಗಂದೂರು ಅವರು ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.