ADVERTISEMENT

ಕಾಂಗ್ರೆಸ್‌ನವರಿಗೆ ತಮ್ಮ ನಾಯಕರು ಯಾರು ಎಂಬುದು ಗೊತ್ತಿಲ್ಲ: ಈಶ್ವರಪ್ಪ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 5:53 IST
Last Updated 19 ಸೆಪ್ಟೆಂಬರ್ 2019, 5:53 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ದಾವಣಗೆರೆ: ‘ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ತಮ್ಮ ಅಸ್ತಿತ್ವ ಗುರುತಿಸಿಕೊಳ್ಳುವುದಕ್ಕೆ ಜನಾಂದೋಲನ ನಡೆಸುತ್ತಿದೆ’ಎಂದು ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಸಲ ಗುರುವಾರ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕಾಂಗ್ರೆಸ್‌ನವರಿಗೆ ನಮ್ಮ ನಾಯಕರು ಯಾರು ಎಂಬುದು ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರು ಯಾರು. ವಿಧಾನ ಸಭೆ ಪ್ರತಿಪಕ್ಷದ ನಾಯಕ ಯಾರು ಅಂತಲೇ ಗೊತ್ತಿಲ್ಲ.ಕಾಂಗ್ರೆಸ್ ಇದೇ ಎಂಬುದು ಗೊತ್ತಾಗುತ್ತಿಲ್ಲ’ಎಂದು ವ್ಯಂಗ್ಯವಾಡಿದರು.

ADVERTISEMENT

‘ಕೆಜಿಪಿ ಬಿಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆಗಿದ್ದರು. ತಾನೇ ದೇವರಾಜ ಅರಸು ಎಂಬಂತೆ ಬಿಂಬಿಸಿಕೊಂಡರು. ಅದು ಸುಳ್ಳಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ಹುಡುಕಬೇಕಾಗಿದೆ. ನೇರ ಸಂತ್ರಸ್ತರ ವಿಚಾರ ಕಾಂಗ್ರೆಸ್ ಎತ್ತಿಕೊಳ್ಳುವುದು ಕುತಂತ್ರವಾಗಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ಹತ್ತು ಹನ್ನೇರಡು ಇಲಾಖೆಗಳ ಕಚೇರಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ’ಎಂದರು.

‘ಈಗಾಗಲೇ ರಾಜ್ಯ ಸರ್ಕಾರ ಜಲಪ್ರಳಯದ ನೆರೆ ಸಂತ್ರಸ್ತರ ನೆರವಿಗಾಗಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರತಿಕ್ರಿಯೆ ನೀಡಿದರು.

‘ಕೇಂದ್ರದ ತಂಡಗಳು ಸರ್ವೇ ಮುಗಿಸಿದ್ದು ಕೇಂದ್ರದಿಂದ ಶೀಘ್ರ ಪರಿಹಾರ ಘೋಷಣೆಯಾಗಲಿದೆ .ಕರ್ನಾಟಕ ಅಲ್ಲದೆ ಬೇರೆ ರಾಜ್ಯಗಳಲ್ಲೂ ಜಲಪ್ರವಾಹ ಹಾನಿ ಸೃಷ್ಟಿಸಿದೆ. ಎಲ್ಲಾ ರಾಜ್ಯಗಳಿಗೆ ಪರಿಹಾರ ಘೋಷಣೆ ಸಂದರ್ಭದಲ್ಲಿ ರಾಜ್ಯಕ್ಕೂ ಘೋಷಣೆಯಾಗಲಿದೆ. ಉತ್ತರ ಕರ್ನಾಟಕದ ಜನರ ಅನುಕೂಲಕ್ಕೆ ಬೆಳಗಾವಿಯಲ್ಲಿ ಆಡಳಿತಾತ್ಮಕ ಕೇಂದ್ರ ತೆರೆಯಲು ತೀರ್ಮಾನಿಸಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.