ADVERTISEMENT

ಖಜಾನೆ ಖಾಲಿ: ವೈಫಲ್ಯ ಮರೆಮಾಚಲು ಪ್ರತಿಭಟನೆ- ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 15:22 IST
Last Updated 6 ಫೆಬ್ರುವರಿ 2024, 15:22 IST
B. Y. Vijayendra ಬಿ. ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
B. Y. Vijayendra ಬಿ. ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ   

ಬೆಂಗಳೂರು: ‘ಗ್ಯಾರಂಟಿ’ ಯೋಜನೆಗಳಿಂದ ಬೊಕ್ಕಸ ಬರಿದು ಮಾಡಿಕೊಂಡಿರುವ ಕಾಂಗ್ರೆಸ್‌ ಸರ್ಕಾರ ಆರ್ಥಿಕ ನಿರ್ವಹಣೆಯಲ್ಲಿನ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಅವರು, ‘ಕಾಂಗ್ರೆಸ್‌ ಕೇಂದ್ರದಲ್ಲಿ ಆಡಳಿತ ನಡೆಸಿದ 60 ವರ್ಷಗಳಲ್ಲಿ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ, ತಾರತಮ್ಯಗಳನ್ನು ಸಾಕ್ಷ್ಯ ಸಮೇತ ರಾಜ್ಯದ ಜನತೆಯ ಮುಂದೆ ಇರಿಸುತ್ತೇವೆ’ ಎಂದೂ ಹೇಳಿದ್ದಾರೆ.

‘ಆರ್ಥಿಕ ತಾರತಮ್ಯದ ಸುಳ್ಳುಕಂತೆ ಹೊತ್ತು ‘ಚಲೋ ದಿಲ್ಲಿ’ ಬದಲು ಬರಗಾಲದಿಂದ ತತ್ತರಿಸಿರುವ ರೈತರ ಕಣ್ಣೀರೊರೆಸಿ ಪರಿಹಾರ ನೀಡಲು ‘ಚಲೋಹಳ್ಳಿ’ ಕಾರ್ಯಕ್ರಮ ಆರಂಭಿಸಿ; ನಾವು ನಿಮ್ಮ ಜತೆ ಬರುತ್ತೇವೆ’ ಎಂದು ವಿಜಯೇಂದ್ರ ಸವಾಲು ಹಾಕಿದ್ದಾರೆ.

ADVERTISEMENT

‘ವಿತ್ತೀಯ ಸಮತೋಲನ ಕಾಯ್ದುಕೊಳ್ಳದೇ ಖಜಾನೆ ಖಾಲಿ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸಲು ಮುಂದಾಗಿದೆ. ಇದು ಕೂಡ ವಂಚನೆಯ ಇನ್ನೊಂದು ಮುಖ’ ಎಂದಿದ್ದಾರೆ.

‘ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವಂತೆ ನಿರಂತರವಾಗಿ ಕರ್ನಾಟಕಕ್ಕೇ ತಾರತಮ್ಯ ಧೋರಣೆ ಅನುಸರಿಸಿ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯ ಮಾಡಿರುವ ಇತಿಹಾಸವೇ ಇದೆ. ಇವೆಲ್ಲವನ್ನೂ ನಾವು ಬಿಚ್ಚಿಟ್ಟು ಕಾಂಗ್ರೆಸ್‌ನ ಅಸಲಿ ಮುಖವಾಡವನ್ನು ಕನ್ನಡಿಗರ ಮುಂದೆ ಕಳಚಿಡುತ್ತೇವೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.